Wednesday, December 18, 2013

ದೇವಸ್ಥಾನದ ಸುತ್ತ ನಾಲ್ಕನೇಯ ಪ್ರದಕ್ಷಿಣೆ

ನಾಲ್ಕನೇಯ ಪ್ರದಕ್ಷಿಣೆ ಪ್ರಾರಂಭಿಸುವಾಗ ನನ್ನ ಗಮನಕ್ಕೆ ಬಂದದ್ದು  ದೇವಸ್ಥಾನಗಳ ಮುಖ್ಯದ್ವಾರ ಅಥವಾ ಮಹಾದ್ವಾರ ಅಥವಾ ವಿಮಾನ ಗೋಪುರಗಳ ಎದುರುಗಡೆ, ಅಲ್ಲಿ ಜರಗುವ ವಿಭಿನ್ನ ದೃಶ್ಯಗಳ ಕಡೆಗೆ. ಅಲ್ಲಿಗೆ ನಮ್ಮ ಜನರಿಗೆ ದೇವರ ಮೇಲೆ ಇರುವ ಭಕ್ತಿಯ ಬಗ್ಗೆ ನನಗೆ ಒಂದು ಗೊಂದಲ ಶುರುವಾಯಿತು. ವಿಷಯ ಏನಪ್ಪಾ  ಅಂದರೆ  ಕೆಲವು ಜನ ರಸ್ತೆಯಲ್ಲಿ ಕಾಲ್ನಡಿಗೆಯಲ್ಲಿ ನಡೆದುಕೊಂಡೆ ಸಾಗಲಿ ಅಥವಾ ವಾಹನದ ಮೇಲೆ ಸವಾರಿ ಮಾಡಿಕೊಂಡೆ ಹೋಗಲಿ, ದೇವಸ್ಥಾನ  ಕಂಡ  ತಕ್ಷಣ ಭಕ್ತಿ ಪರವಶರಾಗಿ ಬಿಡುತ್ತಾರೆ.  ನಡೆದುಕೊಂಡು ಹೋಗುವವರು ದೇವಸ್ಥಾನದ ಹತ್ತಿರ ಬಂದ ಕೂಡಲೇ ಅದರ ಮುಂದೆ, ಅಂದರೆ ಗರ್ಭ ಗುಡಿಯಲ್ಲಿರುವ ಮುಖ್ಯ ದೇವರ ಮೂರ್ತಿ ಸರಿಯಾಗಿ ಕಾಣುವ ಹಾಗೆ ನಿಂತುಕೊಳ್ಳುತ್ತಾರೆ.  ನಂತರ ತಮ್ಮ ಪಾದಗಳನ್ನು ಇಲ್ಲಿಗೆ ಬರುವವರೆಗೂ ಬಲು ಮುತವರ್ಜಿಯಿಂದ ರಕ್ಷಿಸಿಕೊಂಡು ಬಂದಿರುವ ಪಾದರಕ್ಷೆಗಳನ್ನು ತ್ಯಜಿಸಿ ತಮ್ಮ ಮುಂದೆ ಇಡುತ್ತಾರೆ. ಆಮೇಲೆ ಕಣ್ಣು ಮುಚ್ಚಿ, ಎರಡು ಕೈ ಜೋಡಿಸಿ ನಮಸ್ಕರಿಸಿ ದೇವರಿಗೆ ಏನಾದರೂ ಬೇಡಿಕೊಳ್ಳುವದಿದ್ದರೆ ಬೇಡಿಕೊಂಡು, ತಮ್ಮ ಕಿರು ಪ್ರಾರ್ಥನೆ ಸಲ್ಲಿಸುತ್ತಾರೆ. ಇಷ್ಟೆಲ್ಲಾ ಆಗುವವರೆಗೆ ಆ ದೇವರು ಮತ್ತು ಈ ಭಕ್ತರ ನಡುವೆ ಕೇವಲ ಇವರ ಪಾದರಕ್ಷೆ ಮಾತ್ರ ಇವೆ ಅಂದುಕೊಳ್ಳುವ ಹಾಗಿಲ್ಲ ಅಲ್ಲಿ ಇನ್ನು ಹತ್ತಾರು ಜನ ಸಾಗಿ ಹೋಗಿರುತ್ತಾರೆ. ಈ ಹತ್ತಾರು ಜನರಲ್ಲಿ ಆರ್ಚಕರು, ದೇವಸ್ಥಾನಕ್ಕೆ ಬರುವ ಭಕ್ತರು, ದೇವರ ನಂಬದೇಯಿರುವ ನಾಸ್ತಿಕರು, ಅನ್ಯ ಧರ್ಮೀಯರು ಹೀಗೆ ಯಾರು ಯಾರೋ ಇರುತ್ತಾರೆ. ಅವರೆಲ್ಲ ಇವರ ಪ್ರಾರ್ಥನೆಗೆ ಸ್ವಲ್ಪ ಅಡಚಣೆ ಮಾಡಿದರೂ ಕೂಡ ಇವರು ಬೇಜಾರು ಮಾಡಿಕೊಳ್ಳುವದಿಲ್ಲ. ಯಾಕೆಂದರೆ ಇವರಿಗೆ ಬೇರೆ ಕಡೆ ಎಲ್ಲೋ ಕೆಲಸದ ಪ್ರಯುಕ್ತ ಹೋಗುವ ಅವಸರ. ದೇವಸ್ಥಾನದ ಒಳಗಡೆ ಹೋಗಿ ಘಂಟಾನಾದ ಮೊಳಗಿಸಿ, ಹೂವು-ಹಣ್ಣು ಕೊಟ್ಟು, ಪೂಜೆ ಸಲ್ಲಿಸಿ, ಮಂಗಳಾರತಿ ಮಾಡಿಸಿ, ದೇವರಿಗೆ ನಮಸ್ಕರಿಸಿ, ತೀರ್ಥ-ಪ್ರಸಾದ ಸ್ವೀಕರಿಸಿ, ಆರತಿ ತಟ್ಟೆಗೆ ದಕ್ಷಿಣೆ ಇಟ್ಟು, ಪ್ರದಕ್ಷಿಣೆ ಹಾಕಿ ಬರುವಷ್ಟು ಪರುಸೊತ್ತಿಲ್ಲ. (ಹೊರಗಡೆನೇ ನಿಂತು ನಮಸ್ಕರಿಸುವದರ ಇನ್ನೊಂದು ಲಾಭವೆಂದರೆ ಮಂಗಳಾರತಿ ತಟ್ಟೆಗೆ ದಕ್ಷಿಣೆ ರೂಪದಲ್ಲಿ ಇಡುವ ಒಂದು ಅಥವಾ ಎರಡು ರೂಪಾಯಿ ನಾಣ್ಯದ ಉಳಿತಾಯ ಕೂಡ ಇರಬಹುದು.) ಇವರು ದಾರಿ ಮಧ್ಯದಲ್ಲಿ ನಿಂತು ಈ ರೀತಿ ಮಾಡುವದರಿಂದ ಬೇರೆಯವರಿಗೆ ಇವರಿಂದ ಒಂದೆರಡು ನಿಮಿಷ ತೊಂದರೆಯಾದರೂ ಕೂಡ  ಅದನ್ನು ಇವರು ತಲೆಗೆ ಹಾಕಿಕೊಳ್ಳುವದಿಲ್ಲ. ಇವರ ಭಕ್ತಿಯನ್ನು ಕಂಡು ದಾರಿಹೋಕ ಜನರೇ  ಇವರಿಗೆ ತೊಂದರೆಯಾಗದಿರಲಿ ಎಂದುಕೊಂಡು ಈ ಹೊರಗಡೆಯ ಭಕ್ತ ಮತ್ತು ಆ ಒಳಗಡೆಯ ದೇವರ ಮಧ್ಯ ಬರದೆ ತಮ್ಮ ಪಥವನ್ನು ಬದಲಿಸಿ ಮುಂದೆ ಸಾಗುತ್ತಾರೆ.

ಇನ್ನು ಇದೇ ಗುಂಪಿಗೆ ಸೇರಿದ ವಾಹನ ಸವಾರರ ಭಕ್ತಿ ಅಥವಾ ನಮಸ್ಕರಿಸುವ ವಿಧಾನ ಇನ್ನೂ ಒಂದು ಹಂತ ಕೆಳಗಿನದು. ಯಾಕೆಂದರೆ ಇವರು ನಿಂತುಕೊಳ್ಳುವದೂ ಇಲ್ಲ, ಪಾದರಕ್ಷೆಗಳನ್ನು ಬಿಡುವುದೂ ಇಲ್ಲ, ನಮಸ್ಕರಿಸಲು ಎರಡೂ ಕೈಗಳನ್ನು  ಬಳಸುವದೂ ಇಲ್ಲ, ವಾಹನದಿಂದ ಕೆಳಗೆ ಇಳಿಯುವದಂದತೂ ಸಾಧ್ಯವೇ ಇಲ್ಲ. ಯಾಕೆಂದರೆ ಇವರ ಅವಸರ ಕಾಲ್ನಡಿಗೆ ಭಕ್ತರಿಗಿಂತ ಹೆಚ್ಚು. ದ್ವಿಚಕ್ರ ವಾಹನ ಓಡಿಸುವ ಈ ಭಕ್ತರು ತಮ್ಮ ಬಲಗೈಯಲ್ಲಿ ಇರುವ ವೇಗವರ್ಧಕ (accelerator) ಒಂದೆರಡು ಕ್ಷಣ ಬಿಟ್ಟು ಹಣೆ ಮತ್ತು ಎದೆ ಮುಟ್ಟಿಕೊಂಡರೆ ಅದೇ ಧೀರ್ಘ ದಂಡ ನಮಸ್ಕಾರವಾಯಿತು. ಇನ್ನು ಕೆಲವರಂತು ಯಾವುದೇ ಕೈಯನ್ನು ಎತ್ತದೇ ಬರಿ ತಲೆಯನ್ನು ದೇವರ ಕಡೆ ತಿರುಗಿಸಿ ಅರೆಕ್ಷಣ ಸ್ವಲ್ಪ ಬಾಗಿಸಿ ಮತ್ತೆ ತಲೆ ನೆರವಾಗಿ ರಸ್ತೆ ಕಡೆಗೆ ತಿರುಗಿಸುವರು, ಅವರಿಗೆ ಆ ಭಕ್ತಿಯೇ ಸಾಕಷ್ಟು ಆಯಿತು.  

ನಾಲ್ಕನೇಯ  ಪ್ರದಕ್ಷಿಣೆ ಇನ್ನು ಮುಂದೆವರಿದಿದೆ ಸಧ್ಯದಲ್ಲೇ ಮುಗಿಸುವೆ ... 


1 comment: