Saturday, December 9, 2017

ಮೆಜೆಸ್ಟಿಕ್ ನಲ್ಲಿ ಐಹೊಳೆಯ ಬಾವಿ


ಹೆಂಡತಿಯದು ಒಂದು ವಿಚಿತ್ರ ಸ್ವಭಾವ. ಅಥವಾ ಇದೇ ಮಾತನ್ನು ಸಲೀಸಾಗಿ ಸಾಮಾನ್ಯಕರಿಸಿ (generalise) ಹೇಳಲುಬಹುದು ಹೆಣ್ಣಿನ ಮನಸ್ಸನ್ನು ಅರಿಯುವುದು ತುಂಬಾ ಕಷ್ಟ. ಅವಳ ಹಠ, ಮೊಂಡುತನದ ಮುಂದೆ ಗಂಡನ ಅಥವಾ ಯಾವುದೇ  ಗಂಡಸಿನ  ಆಟ ನಡೆಯೋದಿಲ್ಲ. ಅವತ್ತು ಶನಿವಾರವಾದ್ದರಿಂದ ಮಕ್ಕಳನ್ನು ಆಚೆ ಕರೆದುಕೊಂಡು ಹೋಗಿ ಸುತ್ತಾಡಿಕೊಂಡು ಬರೋಣ ಅಂತ ಯೋಚಿಸಿ ಅದನ್ನ ಅವಳ ಮುಂದೆ ಪ್ರಸ್ತಾಪಿಸಬೇಕು ಅಂದುಕೊಂಡೆ. ಆದರೆ ಇವಳು ಅದ್ಯಾವ ಮನಸ್ಥಿತಿಯಲ್ಲಿದ್ದಳೋ ಗೊತ್ತಿಲ್ಲ ಮುಖವನ್ನು ಬಲೂನಿನಂತೆ ಊದಿಸಿಕೊಂಡು, ಅದಕ್ಕೆ ಹಣೆಯ ಗಂಟನ್ನು ಬಿಗಿಯಾಗಿ ಹಾಕಿಸಿಕೊಂಡು ಕುಳಿತ್ತಿದ್ದಳು. ನನ್ನ ಪೂರ್ವ ಅನುಭದವ ಆಧಾರದ ಮೇಲೆ ಅವಳಿಗೆ  ಈಗ ಕೇಳಿದರೆ ಏನು ಉತ್ತರ ಬಂದೀತೆಂದು ಅಂದಾಜು ಮಾಡಿದ್ದೆ, "ನಾನು ಬರಲ್ಲ!" ಅನ್ನುತ್ತಾಳೆ ಅಂತ ನಾನೇ ಊಹಿಸಿದೆ. ಹಾಗಾಗಿ ಅವಳಿಗೆ ಕೇಳುವ ಗೋಜಿಗೆ ಹೋಗದೇ ಮಕ್ಕಳಿಬ್ಬರನ್ನು ನಾನೇ ತಯಾರು ಮಾಡಿ ನನ್ನ ದ್ವಿಚಕ್ರ ವಾಹನದ ಮೇಲೆ ಯಥಾಪ್ರಕಾರವಾಗಿ ಒಬ್ಬನನ್ನು ಮುಂದೆ, ಇನ್ನೊಬ್ಬನನ್ನು ನನ್ನ ಹಿಂದೆ ಕುಳ್ಳಿರಿಸಿಕೊಂಡು ಶಿರಸ್ತ್ರಾಣ ಸಿಕ್ಕಿಸಿ ಹೊರಟೇಬಿಟ್ಟೆ. ಮೊದಲನೇಯವನಿಗೆ ನಾಲ್ಕು ವರ್ಷ ಎರಡನೇಯವನಿಗೆ ಎರಡು ವರ್ಷ. ಮನೆಯಿಂದ ಆಚೆ ಬಂದಾಗ  ನಾನೊಬ್ಬನೇ ಈ ಇಬ್ಬರು ಚಿಕ್ಕವರನ್ನು ಗಮನದಲ್ಲಿಟ್ಟು ಹತೋಟಿ ಮಾಡುವದು ಸ್ವಲ್ಪ ಕಷ್ಟ ಆದರೂ ಕೂಡ ಒಂದೊಂದು ಸಾರಿ ಇಂತಹ ಕೆಲಸಕ್ಕೆ ಕೈಹಾಕುತ್ತೇನೆ. ಅನಿವಾರ್ಯದಿಂದ.

ನಾನು ಹೋಗಿದ್ದು ಒಂದು ದೊಡ್ಡ ಮತ್ತು ಹಳೆಯ ದೇವಸ್ಥಾನ, ಹಳೆಯ ಅನ್ನುವದಕ್ಕಿಂತ ಪ್ರಾಚೀನ ಅನ್ನಬಹುದೇನೋ. ಯಾಕೆಂದರೆ ಅದರ ಕಟ್ಟಡವೆಲ್ಲ ಕಲ್ಲಿನಿಂದ ಕಟ್ಟಿದ್ದು, ಸುತ್ತಲೂ ಪ್ರದಕ್ಷಿಣೆಗೋಸ್ಕರ ದೊಡ್ಡ  ಪ್ರಾಕಾರವಿತ್ತು. ಅದರ ಮುಂಬಾಗಿಲಿನಲ್ಲಿ ನಿಂತರೇ ಬೆಂಗಳೂರಿನ ಮೆಜೆಸ್ಟಿಕ್ ಭಾಗದಲ್ಲಿರುವ ಸಿಟಿ ಸೆಂಟರ್ ನ ಪ್ರದೇಶದ ಹಾಗೆ ಕಾಣುತ್ತಿತ್ತು. ಸಿಟಿ ಸೆಂಟರ್ ಒಂದು ವೇಳೆ ದೇವಸ್ಥಾನವಾಗಿದ್ದರೆ ಆ ಪರಿಸರ ಹೇಗಿರುತ್ತಿತ್ತೋ ಗೊತ್ತಿಲ್ಲ.

ಮಕ್ಕಳಿಬ್ಬರನ್ನು ಕರೆದುಕೊಂಡು ದೇವಸ್ತಾನಕ್ಕೆ ಹೋಗಿ, ದೇವರ ದರ್ಶನ ಪಡೆದು ಆಚೆಯಿರುವ  ಮುಖ್ಯದ್ವಾರದ ಹತ್ತಿರ ಬಂದು ಹೊಸ್ತಿಲು ದಾಟುತ್ತಿದ್ದೆ. ಅಷ್ಟರಲ್ಲಿ ರಂಗು ರಂಗಿನ ಬಟ್ಟೆ ಧರಿಸಿದ ಏಳೆಂಟು ಜನ ಇರುವ ಒಂದು ಮಾರವಾಡಿ ಪರಿವಾರ ದೇವಸ್ಥಾನ ಪ್ರವೇಶಿಸುತ್ತಿತು. ಅದರಲ್ಲಿರುವ ಒಬ್ಬ ಮದ್ಯವಯಸ್ಕಳೂ ಅಲ್ಲದ ಎಳೆಯ ಹರೆಯದವಳೂ ಅನಿಸದ ಆದರೆ ಮದುವೆಯಾದ, ಅಂದಾಜು ಮೂವತೈದು ನಾಲವತ್ತರ ಆಸುಪಾಸಿನ ಮಹಿಳೆ,  ಹಳದಿ ಬಣ್ಣದ ಸೀರೆಯುಟ್ಟು, ಮಾಮೂಲಿನಂತೆ ತಲೆಯ ಮೇಲೆ ಸೆರಗನ್ನುಹೊತ್ತು ಬಂದಳು. ಹೆಣ್ಣುಮಕ್ಕಳ ವಯಸ್ಸು ಕಂಡು ಹಿಡಿಯುವುದೇ ಕಷ್ಟ ಅಂತಹದರಲ್ಲಿ ಈ ಮಾರವಾಡಿ ಮಹಿಳೆಯರ ವಯಸ್ಸು ಅಂದಾಜಿಸುವುದು ಇನ್ನು ಕಷ್ಟ. ಅವಳು ನನ್ನ ದೊಡ್ಡ ಮಗನನ್ನು ನೋಡಿ ಒಂದು ಮಮತೆಯ ಮುಗುಳ್ನನಗೆಯನ್ನು ಕೊಟ್ಟು ಮುಂದೆ ಹೋದಳು. ಈ ಮಾರವಾಡಿಗಳು ಎಷ್ಟೇ ಶ್ರೀಮಂತರಾದರೂ, ಅಧುನಿಕ ಜಗತ್ತಿನಲ್ಲಿ ಇದ್ದರೂ ಕೂಡ ಕೆಲವು ಸಂಪ್ರದಾಯಗಳನ್ನು ಇನ್ನೂ ಬಿಟ್ಟಿಲ್ಲ. ಅದರಲ್ಲಿ ಸದಾ ತಲೆಯ ಮೇಲಿನ ಸೆರಗುಯಿಟ್ಟುಕೊಳ್ಳುವ ಪದ್ಧತಿಯೂ ಒಂದು. ಈ ಪರಿವಾರದವರು ನಮ್ಮನ್ನು ದಾಟುವಷ್ಟರಲ್ಲಿ ನಾನು ದೇವಸ್ಥಾನದ ಹೊಸ್ತಿಲನ್ನು ದಾಟಿದ್ದೆ. ಇರುವ ಎರಡು ಮೂರು ಮೆಟ್ಟಿಲುಗಳನ್ನು ಇಳಿದು ಕೆಳಗೆ ಬರುವಷ್ಟರಲ್ಲಿ, ಮೆಜೆಸ್ಟಿಕ್ಕಿನ ಗದ್ದಲ ನನ್ನನ್ನು ಆವರಿಸಿತು. ಅಲ್ಲಿರುವ ರಸ್ತೆ ಬದಿಯ ಚಿಕ್ಕಪುಟ್ಟ ವಸ್ತುಗಳನ್ನು ಮಾರುವವರ ತಮಾಷೆ, ಗಲಾಟೆ ಎಂದಿನಂತೆ ಸಾಗಿತ್ತು. ಅದರಲ್ಲಿ ಒಂದು ಕಡೆಯಿಂದ ಒಬ್ಬರು ಒಂದೆರಡು ಟೋಪಿ ಬಿಸಾ ಕಿದರು. ಒಂದು ಟೋಪಿ ನನ್ನ ಎರಡೂ ಕಾಲುಗಳ ಮಧ್ಯ ಬಂದು ಸಿಕ್ಕಿಕೊಂಡಿತು. ಟೋಪಿ ಹಾರಿ ಬಂದ ಕಡೆಗೆ ದೃಷ್ಟಿ ಹಾಯಿಸಿದರೆ ಅಲ್ಲಿ ಇಬ್ಬರು ಮೂವರು ಮಂಗಳಮುಖಿಯರು ಕುಚೇಷ್ಟೆಯಿಂದ ನನ್ನ ಕಡೆಗೆ ನೋಡಿ ನಗುತ್ತಿದ್ದರು. ನಾನು ಟೋಪಿಯನ್ನು, ಅವುಗಳ ಮಾಲಿಕನ ಕೆಡೆಗೆ ಹಾರಿಸಿ ಎಸೆದು ಮತ್ತೆ ನನ್ನ ಲೋಕಕ್ಕೆ ಮರಳಿ ಬಂದೆ. ನನ್ನ ಅಕ್ಕ-ಪಕ್ಕ ನೋಡಿದೆ, ಮಕ್ಕಳಿಬ್ಬರೂ ಎಲ್ಲಿ? ಹಿಂದೆಯೂ ಇಲ್ಲ.

ನನ್ನ ಎದೆ ಧಸಕ್ ಎಂದಿತು. ಮಕ್ಕಳು ನನಗಿಂತ ಸ್ವಲ್ಪ ಹಿಂದೆ ಆಟವಾಡುತ್ತಾ ಬರುತ್ತಿದ್ದರು, ದೇವಸ್ಥಾನದಲ್ಲಿ ಅವರು ನನ್ನ ಹಿಂದೆ ಮುಂದೆಯೇ ಓಡಾಡುತ್ತಿದ್ದರು. ಆದರೆ ನಾನು ಮುಖ್ಯದ್ವಾರದ ಮೂರು ಮೆಟ್ಟಿಲು ಇಳಿದು ಬರುವಷ್ಟರಲ್ಲಿ ಅವರು ಮಾಯವಾಗಿದ್ದರು. ತಲೆ ಕೆಟ್ಟುಹೋಯಿತು, ಆ ಮೆಜೆಸ್ಟಿಕ್ ನಂತಹ ಗಲಾಟೆಯಲ್ಲಿ ಮಕ್ಕಳನ್ನು ಕಳೆದುಕೊಂಡ ನಾನು ಏಕಾಂಗಿಯಾಗಿ ಭಯದಲ್ಲಿ  ತತ್ತರಿಸಿದೆ. ಮಕ್ಕಳು ದೇವಸ್ಥಾನದ ಆಚೆ ಹೋಗಿಲ್ಲ ಅವರು ನನಗಿಂತ ಎರಡು ಹೆಜ್ಜೆ ಹಿಂದೆ ಇದ್ದರು ಅಂತ ನನಗೆ ನೆನಪಾಯಿತು. ಅವರು ಇನ್ನೂ ಒಳಗಡೆಯೇ ಇರಬಹುದು ಎಂದುಕೊಂಡು ನಾನು ದೇವಸ್ಥಾನ ಆವರಣ ಮತ್ತೆ ಪ್ರವೇಶಿಸಿದೆ. ಅಲ್ಲಿ ಎಡಭಾಗದಲ್ಲಿ ಒಂದು ಉಪದೇವಸ್ಥಾನವಿತ್ತು, ಮುಖ್ಯ ದೇವಸ್ಥಾನಕ್ಕಿಂತ ಚಿಕ್ಕದಾದರೂ ಅದರಲ್ಲಿಯೂ ಕೂಡ ಐವತ್ತು ಅರವತ್ತು ಜನ ಕೂರುವಷ್ಟು ದೊಡ್ಡ ಜಾಗವಿತ್ತು. ಅಲ್ಲಿ ಮಕ್ಕಳನ್ನು ಹುಡುಕಿದೆ ಅವರಲ್ಲಿರಲಿಲ್ಲ. ಆ ಮಾರವಾಡಿ ಪರಿವಾರ ಅಷ್ಟರಲ್ಲಿ ಅಲ್ಲಿ ಒಂದು ಕಡೆ ಕುಳಿತ್ತಿದ್ದರು.  ಆ ಹಳದಿ ಬಣ್ಣದ ಸೀರೆಯುಟ್ಟ ಮಹಿಳೆ ನನ್ನ ಹುಡುಗರನ್ನು ನೋಡಿರಬಹುದು ಎಂದು ಅಂದಾಜಿಸಿ, ನಾನು ಅವಳಲ್ಲಿ ವಿಚಾರಿಸಿದೆ, "ನನ್ನ ಮಕ್ಕಳನ್ನು ನೋಡಿದಿರಾ" ಅಂತ ಕೇಳಿದೆ, ಅವಳು ಅದೇ ಮಂದ ಮುಗುಳ್ನಗೆಯಲ್ಲಿ ಇಲ್ಲ ಅಂತ ತಲೆ ಅಲ್ಲಾಡಿಸಿದಳು. ಆ ಉಪ ದೇವಸ್ಥಾನದಿಂದ ಆಚೆ ಬಂದು ಎಡಕ್ಕೆ ತಿರುಗಿ ಮುಖ್ಯ ಪ್ರಾಂಗಣದಲ್ಲಿ ಹುಡುಕಾಡಲು ಪ್ರಾರಂಭಿಸಿದೆ. ಅವರಿಬ್ಬರ ಹೆಸರನ್ನು ಒಂದಾದ ಮೇಲೆ ಒಂದರಂತೆ ಕೂಗುತ್ತಾ ಹೋದೆ. ಮುಖ್ಯ ದೇವಸ್ಥಾನದ ಬಲಗಡೆಯ ಪ್ರದಕ್ಷಿಣಾ ಪಥದಲ್ಲಿ ಸಾಗಿ ಮುಂದೆ ಬಂದಿದ್ದೆ. ನಾನು ಮುಂದೆ ಹೋದಂತೆ ಅಲ್ಲಿ ಜನರ ಓಡಾಟ ಕಡಿಮೆಯಾಗಿತ್ತು. ಆದರೂ ಮಕ್ಕಳ ಹೆಸರನ್ನು ಕೂಗುವುದನ್ನು ನಾನು ನಿಲ್ಲಿಸಲಿಲ್ಲ. ಎಲ್ಲಿಯೂ ಮಕ್ಕಳು ಕಾಣುತ್ತಿಲ್ಲ. ನನ್ನ ದಿಗಿಲು ಇಮ್ಮಡಿಗೊಂಡಿತು. ಇಮ್ಮಡಿ ಏನು? ಅದು ಎಣಿಸಲಸಾಧ್ಯ ಆಗುವಷ್ಟು ಗುಣಿಸಿತು. ನನ್ನ ಹುಡುಕಾಟ ಹುಚ್ಚರ ಓಡಾಟದಂತೆ ಪರಿವರ್ತನೆಯಾಯಿತು. ನನ್ನ ನೋಡಿದ ಯಾರಿಗೇ ಆದರೂ ನನ್ನ ಪರಿಸ್ಥಿತಿ ಚೆನ್ನಾಗಿ ಅರ್ಥವಾಗುತ್ತಿತ್ತು. ಈಗ ನಾನು ಬಲಕ್ಕೆ ತಿರುಗಿ ದೇವಸ್ಥಾನದ ಹಿಂದಿನ ಭಾಗಕ್ಕೆ ಬಂದಿದ್ದೆ. ಅದು ಅಲ್ಲಲ್ಲಿ ಜಾಲಿಗಿಡಗಳು ಬೆಳೆದು ಇನ್ನಷ್ಟು ಭಾಯಾನಕವಾಗಿತ್ತ್ತು. ಅಲ್ಲಿ ಒಂದು ಕೆಂಪು ಕಲ್ಲಿನ ಮನೆಯು ದೇವಸ್ಥಾನದ ಬೆನ್ನಿಗೆ ಬೆನ್ನು ತಾಗಿಸಿದ್ದಂತೆ ಇತ್ತು. ಆದರೆ ಈ ಮನೆ ಹಿಂದೆ ದೇವಸ್ಥಾನವಿದೆ ಮತ್ತು ಅದರ ಆಚೆ ಮೆಜಿಸ್ಟಿಕ್ ನ ಗದ್ದಲವಿದೆ ಅನ್ನುವ ಯಾವುದೇ ಸುಳಿವು ಅಲ್ಲಿರಲಿಲ್ಲ. ಒಂದು ದೂರದ ಹಳ್ಳಿಯ ವಾತಾವರಣದಂತ್ತಿತ್ತು. ಅದು ಹೇಗೆ ಸಾಧ್ಯ?  ಆ ಮನೆಯ ಮುಂದಿನ ಕಟ್ಟೆಯ ಮೇಲೆ ಮೂವರು ಬಿಳಿತಲೆಯ ಹಿರಿಯ ರೈತರು ಧೋತ್ರ ಉಟ್ಟವರು ಹಾಯಾಗಿ ಹರಟುತ್ತಾ ಕುಳಿತ್ತಿದ್ದರು. ಅದರಲ್ಲಿ ಒಬ್ಬ ಮಧ್ಯದಲ್ಲಿ ಕುಳಿತವ ನಾರಂಜಿಯಿಂದ ತೆಗೆದ ನಾರಿನಿಂದ ಹಗ್ಗ ಹೊಸೆಯುತ್ತಿದ್ದ. ಬಹುಶಃ ಆ ಮನೆಯ ಒಡೆಯ ಅವನೇ ಇರಬೇಕು. ಆ ಜಾಗ ಈ ಮೂವರನ್ನು ಬಿಟ್ಟು ಅಕ್ಷರಶಃ ನಿರ್ಜನವಾಗಿತ್ತು. ಅಲ್ಲಿ ನನ್ನ ಬಲಭಾಗಕ್ಕೆ ಈ ಒಂದು ಮನೆ ಮತ್ತು ಎಡಭಾಗಕ್ಕೆ ಜಾಲಿ ಕಂಟಿಯಿಂದ ಕೂಡಿದ ಪಾಳು ಜಾಗ. ಅಲ್ಲಿ ಹುಡುಕುವಂತಹದ್ದೇನು ಇರಲಿಲ್ಲ ಏಕೆಂದರೆ ಎಲ್ಲವೂ ಸ್ಪಷ್ಟವಾಗಿ ಕಾಣಿಸುತ್ತಿತು. ಆದ್ದರಿಂದ ನಾನು ರಭಸವಾಗಿ ಅವರ ಮುಂದಿನಿಂದ ಓಡುತ್ತಾ ಅವರಿಗೆ ಕೂಗಿ ಕೇಳಿದೆ. "ಈ ಕಡೆ ನೀವೇನಾದರೂ ಇಬ್ಬರು ಮಕ್ಕಳು ಹೋಗುದನ್ನ ನೋಡೀರಿ?" ಓಟ ಮಾತ್ರ ನಿಲ್ಲಲಿಲ್ಲ. ಹಗ್ಗ ಹೊಸೆಯುವ ವ್ಯಕ್ತಿ "ಇಲ್ಲಾ... !" ಅಂದನು. ತಮ್ಮ ಹರಟೆಯಲ್ಲಿ ತಲ್ಲೀನರಾದವರಲ್ಲಿ ಇದು ಅಪೇಕ್ಷಿತ ಉತ್ತರವೇ ಎನಿಸಿತು. ನಾನೊಂದಿಷ್ಟುಮುಂದೆ ಹೋಗುವದರಲ್ಲಿ ಆ ಹಿರಿಯನ ಪಕ್ಕ ಕುಳಿತವ ಏನೋ ಹೇಳಿದನೋ ಅಥವಾ ಇವನಿಗೆಯೇ ನೆನಪಾಯಿತೋ ಗೊತ್ತಿಲ್ಲ  ಅವನು "ಹಾಂ ಇಕಡಿ ಯಾಡ್ದ ಹುಡುಗುರು ಹೋಗ್ಯಾರ" ಎಂದು ರಾಗವಾಗಿ ಕೂಗಿ ಹೇಳಿದ. ನನಗೆ ಸ್ವಲ್ಪ ಬಲ ಬಂದಿತು. ನನ್ನ ಹುಡುಕಾಟ ಸರಿಯಾದ ದಾರಿಯಲ್ಲಿದೆ ಅಂತ ವಿಶ್ವಾಸ ಹುಟ್ಟಿತು. ಓಟದ ರಭಸವನ್ನು ಇನ್ನೂ ಹೆಚ್ಚಿಸಿದೆ. ಆದರೆ ಮಕ್ಕಳೆಲ್ಲಿ?

ಈಗ ನಾನು ಮತ್ತೆ ಬಲಕ್ಕೆ ತಿರುಗಿದೆ, ಅದು ಒಂದು ಬಯಲು ಪ್ರದೇಶ ಅಲ್ಲಿ ಸ್ವಲ್ಪ ನೀರು ನಿಂತಿತ್ತು. ಮುಂದೆ ಹೋದರೆ ಕೆಂಪು ಕಲ್ಲಿನಿಂದ ಕಟ್ಟಿದ ವಿಶಾಲವಾದ ಅಷ್ಟೇ ಪ್ರಾಚೀನದಾದ ಐಹೊಳೆಯಲ್ಲಿಯಂತಹ ಒಂದು ಬಾವಿ. ಬಾವಿಗೆ ಒಳಗೆ ಇಳಿಯಲು ಮೆಟ್ಟಿಲುಗಳಿದ್ದವು. ಆ ಮೆಟ್ಟಿಲುಗಳನ್ನು ಸಮೀಪಿಸುತ್ತಿದಂತೆ ನನಗೆ ಇಬ್ಬರೂ ಮಕ್ಕಳು ಆಟವಾಡುತ್ತಾ ಬಾವಿಯಲ್ಲಿ ಇಳಿಯುವುದು ಕಂಡಿತು. ಅವರು ನೀರಿನ ಮಟ್ಟಕ್ಕಿಂತ ಒಂದೆರೆಡು ಮೆಟ್ಟಿಲು ಅಷ್ಟೇ ಮೇಲಿದ್ದರು. ಆದರೆ ನೀರಿನ ಕಡೆಗೆಯೇ ನಡೆದಿದ್ದರು, ನನ್ನ ಆತಂಕ, ಭಯ ಇನ್ನೂ ಹೆಚ್ಚಾಯಿತು. ಅವರು ನೀರಿಗೆ ಇಳಿದರೇ? ಇಳಿದರೇ ಏನು ಬಂತು, ಅವರು ನೀರಿಗೆ ಇಳಿದೇಬಿಟ್ಟರು, ಆದರೆ ಅಲ್ಲಿ ನೀರಿನ ಆಳ ಅಷ್ಟೇನೂ ಇರಲಿಲ್ಲ ಮಕ್ಕಳ ಮೊಳಕಾಲಿಗೆ ಬರುವಷ್ಟು ಇತ್ತು. ಅದು ನನಗೆ ಸ್ವಲ್ಪ ಸಮಾಧಾನ ಕೊಟ್ಟಿತು,  ಸಧ್ಯ ಕಣ್ಣಿಗೆ ಕಂಡರಲ್ಲ ಎನಿಸಿತು. ಆದರೆ ಇವರು ಆಟವಾಡುತ್ತಾ ಮುಂದೆ ಹೋದರೇ, ಆ ಬಾವಿ ಒಂದೆರಡು ಹೆಜ್ಜೆಯ ನಂತರ ಆಳವಾಗಿದ್ದರೇ? ನಾನು ಅವಸರ ಅವಸರದಲ್ಲಿ ಮೆಟ್ಟಿಲು ಇಳಿಯಲು ಧಾವಿಸಿದೆ. ಅದೇಕೋ ಅವರನ್ನು ಕಂಡ ತಕ್ಷಣ  ಹೆಸರು  ಕೂಗುವದನ್ನು ನಿಲ್ಲಿಸಿದ್ದೆ. ಬಹುಶಃ ಓಟದ ದಣಿವಿನಿಂದ ಬಾಯಾರಿ, ನಾಲಿಗೆ ಒಣಗಿತ್ತು.

ಅಷ್ಟರಲ್ಲಿ ಭಯದಿಂದಾಗಿ ಎಚ್ಚರವಾಯಿತು, ಕಣ್ಣು ತೆರೆದೆ. ನೋಡಿದರೆ ನನ್ನ ಮೊದಲ ಮಗ ಕಣ್ಣ ಮುಂದೆಯೇ ನನ್ನ ಕಡೆಗೆ ಮುಖ ಮಾಡಿ ಮಲಗಿದ್ದಾನೆ, ಚಿಕ್ಕವ ತನ್ನ ಅಮ್ಮನ ಹತ್ತಿರ ಮಲಗಿದ್ದವ ಎದ್ದು ತನ್ನಷ್ಟಕ್ಕೆ ತಾನೇ ಮಾತಾಡಿಕೊಂಡು ಆಟವಾಡುತ್ತಿದ್ದಾನೆ. ಸದ್ಯ ಇದು ಮದ್ಯಾನ್ಹ ಮಲಗಿದಾಗಿನ ಕನಸು ಅಂತ ಗೊತ್ತಾಯಿತು. ಆದರೆ ಎದೆ ಮಾತ್ರ ಇನ್ನೂ ಢವ ಢವ ಅಂತ ಬಡಿದುಕೊಳ್ಳುತ್ತಿತ್ತು. ಕಣ್ಮುಂದೆ ಮುಗ್ದತೆಯಿಂದ ಮಲಗಿರುವ ಮಗನ ಮೈಮೇಲೆ ಮೃದುವಾಗಿ ಕೈಹಾಕಿ ಅಪ್ಪಿದೆ. ಅವನ ನಿದ್ರೆಯಲ್ಲಿಯ ಸಮಾಧಾನ ಚಿತ್ತದ ಆ ಮುಖವು, ಕನಸು ಏರಿಸಿದ ಎದೆ ಬಡಿತವನ್ನು ನಿಧಾನವಾಗಿ ಇಳಿಸಲಾರಂಭಿಸಿತು.


Sunday, November 5, 2017

ಜಮಖಂಡಿಯ ಗುರುವಾರ

ನನ್ನ ಹುಟ್ಟೂರು ಜಮಖಂಡಿ. ದೊಡ್ಡ ನಗರವಲ್ಲ ಆದರೂ, ಓನು ಸುವ್ಯವಸ್ಥಿತ ಪಟ್ಟಣ. ಈಗ ಅದು  ಕಾಲಕ್ಕನುಗುಣವಾಗಿ ತುಂಬಾ ಬದಲಾಗಿದೆ. ಮೂವತ್ತು ವರ್ಷದ ಹಿಂದೆ ಬಾಲ್ಯದಲ್ಲಿ ನಾ ಕಳೆದ ಸಮಯವನ್ನು ಮರೆಸುವಷ್ಟು ಬದಲಾಗಿದೆ. ಆದರೆ ಭೌತಿಕವಾಗಿ ಬದಲಾಗಿದ್ದನ್ನು ಬದಿಗೆ ಇಟ್ಟರೇ, ನನ್ನ ಮನದಲ್ಲಿ ಅಚ್ಚು ಮುಡಿಸಿದ ಕೆಲವು ಸವಿ ನೆನಪುಗಳು ಇನ್ನೂ ಹಾಗೆಯೇ ಬದಲಾಗದೇ ಇವೆ. ನನ್ನ ಮನಕ್ಕೆ ತಂಪುಯೆರೆಯುತ್ತವೆ. ಅದೊಂದು ಪಟ್ಟಣ ಆದ್ದರಿಂದ ಅಲ್ಲಿ ಪ್ರತಿ ಗುರುವಾರ  ಸಂತೆ ಜೋರಾಗಿಯೇ ಸೇರುತ್ತಿತ್ತು ಮತ್ತು ಅದು ಅಷ್ಟೇ ವ್ಯವಸ್ಥಿತವಾಗಿಯೇ ಇರುತ್ತಿತ್ತು. ಎಲ್ಲೆಂದರಲ್ಲಿ ಎಲ್ಲರೂ ಕೂತು ಎಲ್ಲವನ್ನು ಮಾರುವ ಪದ್ಧತಿಯೇ ಇರಲಿಲ್ಲ, ನಿರ್ದಿಷ್ಟ ಜಾಗದಲ್ಲಿ ನಿರ್ದಿಷ್ಟ ಪದಾರ್ಥಗಳನ್ನು ಮಾರುವವರು ಕೂರುತ್ತಿದ್ದರು. ಆ ಜಾಗಗಳೆಲ್ಲಾ ಹೆಚ್ಚು ಕಡಿಮೆ ಅದೇ ಹೆಸರಿನ ಪೇಟೆಯೆಂದು ಕರೆಯಲ್ಪಡುತ್ತಿದ್ದವು. ದಿನಾಲೂ ಬೆಳಗಿನ ಸಮಯದಲ್ಲಿ ೬:೩೦ ಘಂಟೆ ಅನ್ನುವಷ್ಟರಲ್ಲಿ ಪಕ್ಕದ ಹಳ್ಳಿಯ  ಮೊಸರು ಮಾರುವವರು ಬಂದು, ಒಂದು ಕಡೆ ಕುಳಿತಿರುತ್ತಿದ್ದರು. ಗುರುವಾರ ಮಾತ್ರ ಮಧ್ಯಾನ್ಹ ಆಗುವಷ್ಟರಲ್ಲೇ ಇನ್ನೊಂದು ಕಡೆ ತುಪ್ಪದ ಸಂತೆ ಸೇರುತ್ತಿತು. ಬೆಲ್ಲದ ಸಂತೆ ಒಂದು ಜಾಗದಲ್ಲಾದರೆ, ಕಾಯಿಪಲ್ಲೆ ಸಂತೆ ಯು ಊರಿನ ಮಧ್ಯದ ಜಾಗವನ್ನು ಆವರಿಸುತ್ತಿತು. ಒಂದು ಬದಿ ಜೋಳದ ಪ್ಯಾಟಿ, ಇನ್ನೊಂದು ಬೀದಿ ಅಕ್ಕಿ ಪ್ಯಾಟಿ, ಹಗ್ಗ ಬುಟ್ಟಿ ಮಾರುವವರು ಮತ್ತೊಂದು ಬೇರೆ ಕಡೆ ಹೀಗೆಯೇ ಎಲ್ಲವೂ ತುಂಬಾ ವ್ಯವಸ್ಥಿತವಾಗಿತ್ತು. 

ನಾವು ನಮ್ಮ ಶಾಲೆಯಿಂದ ಮನೆಗೆ ಹೋಗಬೇಕಾದರೆ, ದಾರಿಯಲ್ಲಿ ಸಂತೆಯ ಪಕ್ಕದಲ್ಲೇ ಸಾಗುತ್ತಿದ್ದೆವು. ಶಾಲೆಯ ಹತ್ತಿರವೇ ತುಪ್ಪದ ಸಂತೆ, ಸುತ್ತ-ಮುತ್ತ ಇರುವ ಹೊಳೆಸಾಲಿನ ಹಳ್ಳಿಯ ಜನ ಬೆಣ್ಣೆಯನ್ನು ಹಾಗೆಯೇ ತಂದು ಮೂರು ಕಲ್ಲಿನ ತಾತ್ಕಾಲಿಕ ಓಲೆ ನಿರ್ಮಿಸಿ, ನಮ್ಮೂರಿನಲ್ಲೇ ಬೆಣ್ಣೆಯನ್ನು ಕಾಯಿಸಿ ತುಪ್ಪ ಮಾಡಿ ಮಾರುತ್ತಿದ್ದರು. ಅದು ಒಂದು ದೃಷ್ಟಿಯಿಂದ ಗುಣಮಟ್ಟ ಪ್ರದರ್ಶನ ಕೂಡ ಹೌದು. ಅಲ್ಲಿರುವ ಸುತ್ತ-ಮುತ್ತಣ ಜಾಗವೆಲ್ಲ ತುಪ್ಪದ ಸುಗಂಧದಿಂದ ಘಮ್ಮೇನ್ನುತ್ತಿತ್ತು. ಒಂದೆರಡು ಘಳಿಗೆ ಅಲ್ಲಿ ನಿಂತು ಆ ಅಸ್ವಾದವನ್ನು ಸವಿದು ತುಪ್ಪವನ್ನು ತಿಂದಷ್ಟೇ ಸಂತೋಷದಿಂದ ನಾವು  ಮುಂದೆ ಹೊಗುತ್ತಿದೆವು. ಅಲ್ಲಿಂದ  ಸ್ವಲ್ಪ ಮುಂದೆ ಹೋದರೆ ಒಂದು ಕಡೆ ಬೆಲ್ಲದ ಸಂತೆ ಇನ್ನೊಂದು ಕಡೆ ಮೆಣಸಿನಕಾಯಿ ಮತ್ತು ಮಸಾಲೆಯ ಸಂತೆ ಸೇರುತ್ತಿತ್ತು. ಮೆಣಸಿನಕಾಯಿ ಮಾರುವ ಕಡೆ ಹೋಗಲಾದೀತೇ? ನಾಲ್ಕು ಹೆಜ್ಜೆ ಹೋಗುವಷ್ಟರಲ್ಲೇ ಸೀನುತ್ತ ಮೂಗು ಸೋರಿಸಿಕೊಂಡು  ಸಾಕಾಗಿ ಹೋಗುತ್ತಿತ್ತು.  ನಾವು ಮಾತ್ರ ಆ ಕಡೆ ಹೋಗದೆ ಬೆಲ್ಲ ಸೇರುವ ಜಾಗದಿಂದಲೇ ಹೋಗುತ್ತಿದ್ದೆವು. ನಮ್ಮೂರ ಸುತ್ತಲು ಕೃಷ್ಣಾ ನದಿಯ ನೀರಾವರಿ ಪ್ರದೇಶವಾದ್ದರಿಂದ ಕಬ್ಬು ಬೆಳೆದಿದ್ದವರು ತಮ್ಮ ಹೊಲದಲ್ಲಿ ತಾವೇ ಸ್ವತಃ ಘಾಣದಲ್ಲಿ ತಯಾರಿರುತ್ತಿದ್ದರು. ಈಗಿನ ಹಾಗೆ ಆಗ ಎಲ್ಲರೂ ಸಕ್ಕರೆ ಕಾರ್ಖಾನೆಗೆ ಕಬ್ಬು ಕಳಿಸುತ್ತಿರಲಿಲ್ಲ. ಆ ರೈತರು  ಒಳ್ಳೆಯ ಬೆಲ್ಲ ಮಾರಲು ಜಮಖಂಡಿಗೆ ಬರುತ್ತಿದ್ದರು. ಬೆಲ್ಲ ಕಂಡರೆ ಮಕ್ಕಳು ಸುಮ್ಮನಿರಲಿಕ್ಕೆ ಆಗುತ್ತದೆಯೇ?  ಕೆಲವೊಂದು ಸಲ ನಾವು ದೊಡ್ಡವರ ಹಾಗೆ ಬೆಲ್ಲ ಖರಿದಿಸುವ ಹಾಗೆ ನಟನೆ ಮಾಡಿ ಚೂರು ಬೆಲ್ಲ ಚಿವುಟಿ ತಿಂದರೆ, ಇನ್ನು ಕೆಲವು ಸಲ ವಿನಯವಾಗಿ ಬೆಲ್ಲವನ್ನು ಬೇಡಿಕೊಂಡು ತಿನ್ನುತ್ತಿದ್ದೆವು. ಬೆಲ್ಲ ಮಾರುವವರು ಕೆಲವೊಮ್ಮೆ ಮುಖ ಸಿಂಡರಿಸಿಕೊಂಡರೂ ಕೂಡ ಇಲ್ಲವೆನ್ನದೆ ಮಕ್ಕಳಿಗೆ ಒಂಚೂರು ಬೆಲ್ಲ ಕೊಟ್ಟು ಕಳುಹಿಸುತ್ತಿದ್ದರು. ಉದಾರ ಮನೋಭಾವದ ಪುಣ್ಯಾತ್ಮರು! ಬೆಲ್ಲ ಅಂದರೆ ಸುಮ್ಮನೆ ಖಾಲಿಯಾಗಿ ಇರುತ್ತದೆಯೇ? ಹಾರುವ ಕರ್ಜುಟಗಿ ಹುಳುಗಳಿಂದ ಮುತ್ತಿರುತ್ತಿತ್ತು. ಈ ಹುಳು ಕಚ್ಚಿದರೇ ಬಲು ಕಷ್ಟ,.  ನಮ್ಮನ್ನು ದೂರವಿಡಲು ಈ ಹಳ್ಳಿಯವರು ಆ ಹುಳುಗಳನ್ನು ಬೆಲ್ಲದ ಜೊತೆ ಬೇಕೆಂದಲೇ  ತಮ್ಮ ಊರಿಂದ ಇಲ್ಲಿಗೆ ತಂದಿದ್ದಾರೆನೋ ಅನ್ನುವಂತೆ ನಮಗೆ ಭಾಸವಾಗುತ್ತಿತು. ಆದರೆ ತಿನ್ನಲ್ಲಿಕ್ಕೆ ಬೆಲ್ಲ ಸಿಕ್ಕ ತಕ್ಷಣ ನಾವು ಹುಳುವಿನಿಂದ ಪಾರಾಗಲು ಅಲ್ಲಿಂದ ಬೇಗನೆ ಕಾಲು ಕೀಳುತ್ತಿದ್ದೆವು. ಮುಂದೆ ಹೋದಂತೆ ಕಾಯಿಪಲ್ಲೆ ಸಂತೆ ಒಂದು ಕಡೆ ಸ್ವಲ್ಪ ದೂರದಲ್ಲಿ ಇದ್ದರೇ ಅದರ ವಿರುದ್ಧ ಹಾದಿಯಲ್ಲಿ ಜೋಳದ ಸಂತೆ. ನಮ್ಮ ದಾರಿಯುದ್ದಕ್ಕೂ ಶಿಂದಿ ಕಸಬರಿಗೆ(ಪೊರಕೆ), ಶಿಂದಿ ಬುಟ್ಟಿ, ನೂಲಿನ ಹಗ್ಗ ಮಾರುವವರು, ಚಾಕು ಸಾಣಿ ಹಿಡಿಯುವವರು, ಹೀಗೆ ವಿವಿಧ ಜನರ  ಗದ್ದಲವಿರುತ್ತಿತ್ತು. ಅದನ್ನೆಲ್ಲ ದಾಟಿ ಮುಂದೆ ಬಂದರೆ ನಮ್ಮೂರಿನ ಖೈದಿಗಳ ಕಾರಾಗೃಹವಿತ್ತು. ಅದಕ್ಕೆ ದೊಡ್ಡ ಹಸಿರು ಬಣ್ಣದ ಬಾಗಿಲಿದ್ದು ಅದು ಸದಾ ಮುಚ್ಚಿರುತ್ತಿತು. ಅಲ್ಲಿ ಬಂದರೆ ನಮಗೆ ಒಂದು ಸ್ವಲ್ಪ ಭಯ ಕೂಡ ಆಗುತ್ತಿತ್ತು. ಬಹುಶಃ ನಾವೇನಾದರೂ ತಪ್ಪು ಮಾಡಿದರೆ ಪೊಲೀಸರು ನಮಗೆ ಹಾಗೆಯೇ ತಕ್ಷಣ ಜೈಲಿಗೆ ಹಾಕುತ್ತಾರೆನೋ ಅನ್ನುವ ಭಯದಿಂದ, ಅಲ್ಲಿ ಮಾತ್ರ ತುಂಬಾ ವಿನಯದಿಂದ ಏನೂ ತಂಟೆ ಮಾಡದೇ ಬರುತ್ತಿದ್ದೆವು. ಅದರ ಪಕ್ಕದಲ್ಲೇ ಅಂಚೆ ಕಚೇರಿ, ಸಂತೆಯ ದಿನ ಅಂಚೆ ಕಚೇರಿಯೂ ಕೂಡ ಗಿಜಿಗುಡತ್ತಿತ್ತು. ಅಂಚೆ ಕಚೇರಿಯು ನಾಲ್ಕು ದಾರಿ ಸೇರುವ ಜಾಗಲ್ಲಿ ಒಂದು ಕಡೆಯಿತ್ತು. ಅಲ್ಲಿ ತಂಪಾದ ಪಾನೀಯ ಮಾರುವವರು, ಗೋಲಿ ಸೋಡಾ ಅಂಗಡಿ, ಚಹಾದ ಅಂಗಡಿಗಳಿದ್ದವು. ಅಲ್ಲಿಯದು  ನಮಗೆನೊಂದೂ ರುಚಿಸದು, ಆದರೆ ಅದನ್ನೆಲ್ಲ  ನೋಡಲಿಕ್ಕೆ ಮಾತ್ರ ಒಂಥರಾ ಸಂತೋಷವಾಗುತ್ತಿತ್ತು.  ಇನ್ನು ನಾಲ್ಕು ಹೆಜ್ಜೆ ನಡೆದರೆ ನಮ್ಮ ಮನೆ. ಮನೆಗೆ ಹೋಗವಷ್ಟರಲ್ಲಿ ನಮ್ಮ ತಾತ ಸಂತೆಯಿಂದ ಎರಡೂ ದೊಡ್ಡ ಚೀಲಗಳಲ್ಲಿ ವಾರಕ್ಕೆ ಆಗುವಷ್ಟು ಸಂತೆ ತಂದಿರುತ್ತಿದ್ದರು. ನಮಗೆ ಬೇಕಾದ ಪೇರುಕಾಯಿ(ಸೀಬೆ), ಬಾಳೆಹಣ್ಣು, ಎಳೆಯ ಸೌತೆಕಾಯಿ, ಗಜ್ಜರಿಗಳನ್ನು ನಾವು ಹುಡುಕಿ ತಿನ್ನುತ್ತಿದ್ದೆವು. ಅಷ್ಟರಲ್ಲೇ ಸಾಂಯಕಾಲವಾಗಿದ್ದರೆ, ಸಿದ್ದಪ್ಪ ಅಜ್ಜ ಮನೆಗೆ ಬಂದಿರುತ್ತಿದ್ದ. ಅವನು ಪಕ್ಕದ ಹಳ್ಳಿಯ ರೈತ, ಪ್ರತಿ ಗುರುವಾರ ಸಂತೆಗೆ ಬಂದಾಗ ನಮ್ಮ ಮನಗೆ ತಪ್ಪದೇ  ಬರುತ್ತಿದ್ದ. ಅವನು ಬರುವಾಗ ತಮ್ಮ ಮನೆದೇವರಾದ ವಾರಿಸಿದ್ದಪ್ಪನ ಗುಡಿಗೆ ಹೋಗಿ ಅಲ್ಲಿಂದ ಕಲ್ಲು ಸಕ್ಕರೆ ಪ್ರಸಾದವನ್ನು ತರುತ್ತಿದ್ದ. ನಮ್ಮನ್ನು ಕಂಡರೆ ಅವನು ಕೂಡ ಅಕ್ಕರೆಯಿಂದ ಆ ಕಲ್ಲು ಸಕ್ಕರೆ ಕೊಡುತ್ತಿದ್ದ. ಆ ವಾರಿಸಿದ್ದಪ್ಪನ ಗುಡಿಯನ್ನು ನಾನು ಇಂದಿನ ದಿನದವರೆಗೂ ನೋಡಿಲ್ಲ ಆದರೆ ಅವನ ಪ್ರಸಾದ ತಿಂದಷ್ಟು ಇನ್ನಾವುದೇ ದೇವರ ಪ್ರಸಾದ ತಿಂದಿಲ್ಲ. ಸಿದ್ದಪ್ಪಜ್ಜ ಸೈಕಲ್ಲಿನ ಮೇಲೆ ಸವಾರಿ ಮಾಡಿಕೊಂಡು ನಮ್ಮೂರಿಗೆ ಬರುತ್ತಿದ್ದ. ಅವನ ಸೈಕಲ್ಲು ನಮಗೆ ಬಲು ವಿಚಿತ್ರವಾಗಿ ಕಾಣುತ್ತಿತ್ತು, ನಮ್ಮ ಮನೆಯಲ್ಲಿರುವ ಸೈಕಲ್ಲಿನ ಹಾಗೆ ಅವನ ಸೈಕಲ್ಲಿಗೆ  ಬ್ರೇಕ್ ಮತ್ತು ಸರಿಯಾದ ಪೆಡಲ್ ಗಳು ಇರಲಿಲ್ಲ. ಅದರ ಬಣ್ಣ ಕೂಡ ಮಾಸಿ ಹೋಗಿ ಅದು ಕಪ್ಪಾಗಿತ್ತು. ಬ್ರೇಕ್ ಇಲ್ಲದೇ ಸಿದ್ದಪ್ಪಜ್ಜ ಸೈಕಲ್ಲನ್ನು ಹೇಗೆ ನಿಲ್ಲಿಸುತ್ತಾನೆ ಅಂತ ನಾನು ತುಂಬಾ ತಲೆಕೆರಿಯಿಸಿಕೊಳ್ಳುತ್ತಿದ್ದೆ. ಸಿದ್ದಪ್ಪಜ್ಜ ಸೈಕಲ್ಲಿನ ಚಕ್ರಕ್ಕೆ ತನ್ನ ಕಾಲಿನಿಂದ ಒತ್ತಿ ನಿಲ್ಲಿಸುತ್ತಾನೆ ಅಂತ ಅವನೇ ಒಂದು ಸಾರಿ ಹೇಳಿ ನನ್ನ ಅನುಮಾನ ಪರಿಹರಿಸಿದ್ದ. ಅದು ಆಗ ನಮಗೆ ಕಲ್ಪನೆಗೆ ಮೀರಿದ್ದಾಗಿತ್ತು. 

ನಮ್ಮೂರಿನ ವಾರದ ಸಂತೆ ನೆನೆದರೆ, ಈಗ ಬೆಂಗಳೂರಿನಲ್ಲಿ ನಿತ್ಯ ನಡೆಯುವ ಮಾಲ್ ನಲ್ಲಿಯ ಸಂತೆ ಸಪ್ಪೆ ಅನಿಸುತ್ತದೆ. ಅಲ್ಲಿ ತುಪ್ಪದ ಘಮವಿಲ್ಲ, ಬೆಲ್ಲದ ಸವಿಯಿಲ್ಲ. ನಮ್ಮ ಕರುಳ ಬಳ್ಳಿಯನ್ನು ಎಳೆಯುವ ಆ ಕರುಳ ಹಳ್ಳಿ ಬದಲಾದರೂ ನನ್ನ ಮನದಲ್ಲಿ ಇನ್ನೂ ಹಾಗೆಯೇಯಿದೆ.  

Sunday, April 9, 2017

ತಾಯಿ

ಅಮ್ಮನ ಬಗ್ಗೆ ಎಷ್ಟೋ ಜನ ಕಥೆ, ಕಾದಂಬರಿ, ಕವನ, ಲೇಖನಗಳನ್ನು ಬರೆದಿದ್ದಾರೆ, ಆದರೆ ಅಮ್ಮನ ಸುತ್ತ ಏನೇ ಏಷ್ಟೇ ಬರೆದರೂ ಅದು ನಿತ್ಯ ನೂತನ. ಪ್ರತಿ ಮಗುವಿಗೂ ತನ್ನ ತಾಯಿ ವಿಶಿಷ್ಟ, ವಿಶೇಷ. ತಾಯಿಯು ನಮಗಾಗಿ ಮಾಡಿದ ಒಂದು ಚಿಕ್ಕ ತ್ಯಾಗವನ್ನು ಕೂಡ ನಾವು ಕಡೆಗಾಣಿಸಬಾರದು. ತಾಯಿಯ ಋಣ ತೀರಿಸಲಿಕ್ಕಾಗದಿದ್ದರೂ ಅವಳ ತ್ಯಾಗ, ಮಮತೆಗಳನ್ನು ಗುರುತಿಸಿ ಗೌರವಿಸೋಣ. ಅಂತಹ ನನ್ನ ಒಂದು ಪ್ರಸಂಗ ನಿಮ್ಮ ಜೊತೆ ಹಂಚಿಕೊಳ್ಳುವೆ.

ನಾನು ಬಹುಶಃ ಪ್ರೌಢಶಾಲೆ ಮುಗಿಸಿ ಕಾಲೇಜು ಮೆಟ್ಟಿಲೇರಿದ ಸಮಯವಿರಬಹುದು. ಸ್ವಲ್ಪ ವೈಚಾರಿಕತೆ ಬೆಳೆಯೋ ಸಮಯ ಅನ್ನಿ. ನಾವು ಚಿಕ್ಕವರಿದ್ದಾಗ ನಮ್ಮ ಮನೆಯಲ್ಲಿ ಏನಾದರೂ ವಿಶೇಷ ತಿಂಡಿ ಮಾಡಿದಾಗ ಅಥವಾ ಆಚೆಯಿಂದ ಯಾವುದಾದರೂ ವಿಶಿಷ್ಟ ತಿನ್ನುವ ಪದಾರ್ಥ ಮನೆಗೆ ಬಂದಾಗ ನಾನು ತಿನ್ನಷ್ಟು ತಿಂದು ಇನ್ನು ಬೇಕು ಅನಿಸಿದಾಗ ಅಮ್ಮನ ತಟ್ಟೆಯಿಂದ ತೆಗೆದುಕೊಂಡು ತಿನ್ನುತ್ತಿದ್ದೆ. ಆಗ ನಾನು ನಮ್ಮಮ್ಮನಿಗೆ ಕೇಳಿದೆ "ಮಮ್ಮಿ, ನೀ ಏನಾದರೂ ತಿನ್ನುವಾಗ 'ನನಗ ಅದು ಬೇಕು ಕೊಡು' ಅಂತ ನಾ ಅಂದಾಗ ನೀ ಥಟ್ಟನೇ ನನಗ ತಿನ್ನೋಕ್ಕೆ ಕೊಡತಿಯಲ್ಲ, ನಿನಗ ಅದನ್ನ ತಿನ್ನಬೇಕು ಅಂತ ಅನಿಸುದಿಲ್ಲಾ" ಅಂತ. ಅದಕ್ಕೆ ನಮ್ಮಮ್ಮ ಒಂದೇ ಸಾಲಿನ ಉತ್ತರ ಕೊಟ್ಟಳು "ಯಾಕ್ ಅನಿಸುದ್ದಿಲ್ಲ, ನನಗೂ ತಿನ್ನಬೇಕು ಅನಿಸತೈತಿ" ಅಮ್ಮ ಉತ್ಪ್ರೇಕ್ಷೆಯಿಲ್ಲದೆ ವಾಸ್ತವ ನುಡಿದಿದ್ದಳು. ನಾನು ಮತ್ತೆ ಮರುಪ್ರಶ್ನೆ ಹಾಕಲಿಲ್ಲ ಹಾಗೆಯೇ ಅದರ ನಂತರ ಅಮ್ಮನ ತಟ್ಟೆಯಿಂದ ತೆಗೆದುಕೊಂಡು ತಿನ್ನುವದು ಬಿಟ್ಟುಬಿಟ್ಟೆ. ತನಗೆ ತಿನ್ನುವ ಮನಸ್ಸಿದ್ದರೂ ನಮ್ಮಮ್ಮ ನಾ ಬೇಡಿದಾಕ್ಷಣ ನನಗೆ ಕೊಡತಾಳಲ್ಲ ಅಂತ ನೋವಾಗಿತ್ತು. ಆಗ ಅಮ್ಮನ ಆ ಮಾತು ಸ್ವಲ್ಪ ಅರ್ಥ ಮಾಡಿಕೊಂಡಿದ್ದೆ. ಆದರೆ ಅದನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡು ಅನುಭವಿಸಿದ್ದು ಈಗ ಸುಮಾರು ವರ್ಷಗಳ ನಂತರ. ಈಗ ನಾನು ಮಗನಿಗೆ ಅಪ್ಪನಾಗಿ, ಅವನಲ್ಲಿ ನನ್ನನ್ನು ನಾ ಕಂಡು, ನಾನು ಚಿಕ್ಕವನಿದ್ದಾಗ ನನ್ನ ತಾಯಿಗೆ ಹೀಗೆಯೇ ಕೆಳಿರಬಹುದಲ್ಲ, ಹೀಗೆಯೇ ಮಾಡಿರಬಹುದಲ್ಲವೇ ಅಂತಲ್ಲಾ ಯೋಚಿಸುತ್ತೇನೆ.

ನನಗೆ ಚಿಕ್ಕಂದಿನಿಂದ ಶೇಂಗಾ ಅಂದರೆ ತುಂಬಾ ಇಷ್ಟ. ಹಗಲು ರಾತಿಯೇನ್ನದೆ ಮನೆಯಲ್ಲಿ ಎಲ್ಲಿಯೇ ಬಚ್ಚಿಟ್ಟರೂ ಅದನ್ನು ಬೇಕಾದಾಗ ಹುಡುಕಿ ತಿನ್ನುತ್ತಿದ್ದೆ. ಈಗ ನನ್ನ ಮಗ, ನಾ ತಿನ್ನುವ ಅವಲಕ್ಕಿ, ಉಪ್ಪಿಟ್ಟು, ಚೂಡಾಗಳಲ್ಲಿಯ ಒಂದು ಶೇಂಗಾ ನನಗೆ ತಿನ್ನಲ್ಲಿಕ್ಕೆ ಬಿಡುವದಿಲ್ಲ, ಎಲ್ಲವನ್ನೂ ಹೆಕ್ಕಿ ಹೆಕ್ಕಿ ತಾನೇ ತಿಂದು ಬಿಡುತ್ತಾನೆ. ನಾನು ಇಷ್ಟು ದೊಡ್ಡವನಾದರೂ ನನಗೆ ಶೇಂಗಾ ಮೇಲಿನ ವ್ಯಾಮೋಹವೇನೂ ಕಡಿಮೆಯಾಗಿಲ್ಲ. ನನ್ನಿಷ್ಟದ ಪದಾರ್ಥ ನನ್ನ ಮಗ ತೆಗೆದುಕೊಂಡು ತಿಂದರೆ, ಬೇರೆ ಏನೂ ಅನಿಸುವದಿಲ್ಲ ಮಗನ ಆಸೆಯೀಡೆರಲಿ ಅನ್ನುವದು ಮಾತ್ರ ಮುಖ್ಯ ಅನಿಸುತ್ತೆ. ನಾವು ತಂದೆ-ತಾಯಿಯಾದಾಗಲೇ ಗೊತ್ತಾಗೋದು, ನಮ್ಮ ತಂದೆ-ತಾಯಿಗೆ ನಾವು ಎಷ್ಟೆಲ್ಲಾ ಗೊಳಿಟ್ಟಿದ್ದಿವಿ ಅಂತ. ಈಗ ಅನಿಸುತ್ತೆ ಮಗು ಒಂದು ತುತ್ತು ತಿಂದರೂ ಕೂಡ ಅಪ್ಪ-ಅಮ್ಮನಿಗೆ ಎಷ್ಟೋ ಸಂತೋಷ ಆಗುತ್ತದೆಯಲ್ಲಾ ಅಂತ. ಇಪ್ಪತ್ತು ಮೂವತ್ತು ವರ್ಷಗಳ ಹಿಂದೆ ನಮ್ಮ ತಾಯಿ ನನ್ನನ್ನು ಹೇಗೆ ಬೆಳೆಸಿದಳು ಅನ್ನುವದು ನನಗೆ ಗೊತ್ತಿಲ್ಲ, ನೆನಪೂ ಇಲ್ಲ. ಈ ಸಣ್ಣ ಸಣ್ಣ ವಿಷಯಗಳನ್ನು ನಮಗೆ ಅಮ್ಮನೂ ಹೇಳಲ್ಲ, ಬೇರೆ ಯಾರೂ ತಿಳಿಸೋಲ್ಲ. ಆದರೆ ಈಗ ನನ್ನ ಮಗ ನನಗೆ ಅದನ್ನೆಲ್ಲ ತನ್ನಿಂದ ನನಗೆ ತೋರಿಸಿಕೊಡುತ್ತಿದ್ದಾನೆ.

ಪ್ರತಿ ತಾಯಿಯೂ ಬರಿ ಮಮತೆಯ ಮೂರ್ತಿ ಅಷ್ಟೇ ಅಲ್ಲ ಅವಳು ತ್ಯಾಗದ ಸಂಕೇತ ಕೂಡ. ಮಗುವಿಗಾಗಿ ತಾನು ತಿನ್ನುವದನ್ನು ಬಿಟ್ಟು ಅವನಿಗೆ ತಿನಿಸುವಳು. ಮಗುವಿನ ನಿದ್ದೆಗಾಗಿ ತಾನು ನಿದ್ದೆಗೆಡುವಳು. ಮಗುವಿಗಾಗಿ ತಾಯಿ ಮಾಡಿದ ತ್ಯಾಗ, ಅನುಭವಿಸಿದ ಕಷ್ಟ ಅವಳಿಗೆ ಮಾತ್ರ ಗೊತ್ತು ಆದರೆ ಆಕೆ ಅದನ್ನು ಹೇಳುವದಿಲ್ಲ, ತೋರಿಸಿಕೊಡುವುದೂ ಇಲ್ಲ. ನಾವು ಅರ್ಥ ಮಾಡಿಕೊಳ್ಳಬೇಕು. ನಮಗೆ ಅರ್ಥವಾಗುವದು ಕೂಡ ಸ್ವಲ್ಪ ತಡವಾಗಿಯೇ.

ರಾಜಯೋಗಿ - ಪುಸ್ತಕ ಪರಿಚಯ

ಪುಸ್ತಕ -

ಇದು ಆನಂದಕಂದ ಎಂಬ ಅಂಕಿತನಾಮದಿಂದ ಪ್ರಸಿದ್ಧರಾದ ಡಾ|| ಬೆಟಗೇರಿ ಕೃಷ್ಣಶರ್ಮ ಅವರ ಕನ್ನಡದ ಒಂದು ಕಿರು ಕಾದಂಬರಿ. ಕೇವಲ ೧೫೦ ಪುಟಗಳ ಈ ಪುಸ್ತಕಕ್ಕೆ  ೧೯೯೩ರಲ್ಲಿ ಹುಬ್ಬಳ್ಳಿಯ ಸಾಹಿತ್ಯ ಭಂಡಾರ ಪ್ರಕಾಶಕರಾಗಿದ್ದರು. ಇದೊಂದು ಐತಿಹಾಸಿಕ ಕಾದಂಬರಿಯಾದುದರಿಂದ ಕೆಲವು ವಿಶ್ವವಿದ್ಯಾಲಯಗಳು ತಮ್ಮ ಪಠ್ಯಕ್ರಮದಲ್ಲಿ ಅಳವಡಿಸಿಕೊಂಡು ಆನಂದಕಂದರಿಗೆ ಗೌರವ ಸಲ್ಲಿಸಿದ್ದಾವೆ.

ಕಾಲಘಟ್ಟ -

ವಿಜಯನಗರದ ಮೊದಲ ರಾಜವಂಶವಾದ ಸಂಗಮ ವಂಶದ ಸಂಧ್ಯಾಕಾಲದ ಸುತ್ತ ಹೆಣೆದ ಕಥೆ ಇದಾಗಿದೆ. ಎರಡೆನೇಯ ವಿರುಪಾಕ್ಷರಾಯನ  ದುರಾಡಳಿತದಿಂದ ಸಂಗಮ ವಂಶದ ಅವನತಿಯಾಗಿ ಸಾಳುವ ವಂಶದ ಉದಯ ಆಗುವ ಪರಿಯ ಬಗ್ಗೆ ಬರೆದ ಕಾದಂಬರಿಯಿದಾಗಿದೆ. ಕೆಲವು ಐತಿಹಾಸಿಕ ನೈಜ ವ್ಯಕ್ತಿಗಳ ಜೊತೆಗೆ ಹಲವು ಕಾಲ್ಪನಿಕ ಪಾತ್ರಗಳೊಂದಿಗೆ ಕಥೆಯು ತುಂಬಾ ಸೊಗಸಾಗಿ ಮೂಡಿಬಂದಿದೆ. ಅದಕ್ಷ ದೊರೆ ಹಾಗೂ ಕಪಟ ಮುಸ್ಲಿಂ ವೈರಿಗಳಿಂದ ವಿಜಯನಗರವು ಬಸವಳಿಯುತ್ತಿರುವಾಗ ಅಲ್ಲಿನ ಆಗುಹೋಗುಗಳನ್ನು ತುಂಬಾ ನಿಜ ಎನಿಸುವ ರೀತಿಯಲ್ಲಿ ಆನಂದಕಂದ ಅವರು ಬರೆದಿದ್ದಾರೆ. ಪೋರ್ತುಗೀಸರ ಉಪಸ್ಥಿತಿ ಅದೇ ಕಾಲದಲ್ಲಿ ಇದ್ದರೂ ಕೂಡ  ಅದನ್ನು ಕಾದಂಬರಿ ರಚಿಸುವಾಗ ಪರಿಗಣಿಸಿಲ್ಲ. ರಾಜಕೀಯದ ತಂತ್ರ-ಕುತಂತ್ರ, ರಾಜನಿಷ್ಠೆ, ನಾಡಭಕ್ತಿ ಎಲ್ಲವೂ ಸಮಸಮವಾಗಿ ಹೊಂದಿಸಿ ಯಾವುದೂ ಉತ್ಪ್ರೆಕ್ಷೆಯೇನಿಸದಂತೆ ಅಚ್ಚುಕಟ್ಟಾಗಿ ಬರೆಯಲಾಗಿದೆ. ಕೊನೆಯಲ್ಲಿ ವಿರುಪಾಕ್ಷರಾಯನ ಹತ್ಯೆಯಾದಾಗ ರಾಣಿಯರೆಲ್ಲ ಸತಿ ಸಹಗಮನಕ್ಕೆ ಆಹುತಿಯಾಗುವದು ಕೇವಲ ಕಾಲ್ಪನಿಕವೋ ಅಥವಾ ಅದೂ ಕೂಡ ಐತಿಹಾಸಿಕ ನೈಜಘಟನೆಯೋ  ಸ್ಪಷ್ಟವಾಗಿಲ್ಲ. 

ಪ್ರಧಾನ ಪಾತ್ರಗಳು -

ಸಾಳುವ ವಂಶದ ನರಸಿಂಹನಾಯಕ ವಿರುಪಾಕ್ಷರಾಯನ ಆಡಳಿತದಲ್ಲಿ  ಒಬ್ಬ ದಕ್ಷ ಅಧಿಕಾರಿಯಾಗಿದ್ದು ವಿಜಯನಗರದ ಸಾರ್ವಭೌಮತ್ವಕ್ಕೆ ಶ್ರಮಿಸುವ ದಂಡನಾಯಕನಂತೆ ಬಿಂಬಿಸಲಾಗಿದೆ. ನರಸಿಂಹ ನಾಯಕನಿಗೆ ತಾನೇ ಸ್ವತಃ ಮುಂದಿನ ರಾಜನಾಗಬೇಕೆಂಬ  ಮಹತ್ವಾಕಾಂಕ್ಷೆಯಿತ್ತು ಅನ್ನುವದನ್ನು ಎಲ್ಲಿಯೂ ಸಂಶಯ ಮೂಡುವ ಹಾಗೇ ಬರೆದಿಲ್ಲ. ಬದಲಿಗೆ ಸಂಗಮ ವಂಶಸ್ತನಾದ ರಾಜಶೇಖರನಿಗೆಯೇ ರಾಜಪಟ್ಟ ನೀಡುವ ರಾಜಧರ್ಮ ನರಸಿಂಹನಾಯಕನಿಗೆ ಇತ್ತು ಅಂತ ತೋರಿಸಲಾಗಿದೆ. ಆದರೆ ಇತಿಹಾಸ ನೋಡಿದರೆ ಗೊತಾಗುತ್ತದೆ ನರಸಿಂಹನಾಯಕನು, ವಿರುಪಾಕ್ಷರಾಯನ ನಂತರ ತಾನೇ ಗದ್ದುಗೆ ಏರಿದನೆಂದು.

ಕಥಾನಾಯಕ ರಾಜಕುಮಾರನಾದರೂ ಯೋಗಿಯಂತೆ ಜೀವಿಸುವದರಿಂದ ಬಹುಶಃ ಕಾದಂಬರಿಗೆ ರಾಜಯೋಗಿ ಅಂತ ಹೆಸರಿಟ್ಟಿರಬಹುದು ಅಥವಾ ಅವನು ವಿರುಪಾಕ್ಷರಾಯನ ನಂತರ ರಾಜನಾಗಲಿಲ್ಲ ಅನ್ನುವ ಕಾರಣಕ್ಕೆ ಪುಷ್ಟಿಕೊಡಲು ಅವನ ವ್ಯಕ್ತಿತ್ವವನ್ನು ಯೋಗಿಯಂತೆ ಕಥೆಯಲ್ಲ್ಲಿ ಬೆಳೆಸಿರಬಹುದು. ರಾಜಶೇಖರನ ತಮ್ಮ ಪೆದ್ದರಾಯ ರಾಜನಾಗಲಿ ಅಂತ ರಾಜಶೇಖರನ ಇಚ್ಛೆಯಿತ್ತೆಂದು ಕೊನೆಯಲ್ಲಿ ಹೇಳಿದರೂ ಪೆದ್ದರಾಯ ಅತೀ ಕಡಿಮೆ ಸಮಯ ರಾಜನಾಗಿದ್ದ ಅಂತ ಇತಿಹಾಸದಿಂದ ಗೊತ್ತಾಗುತ್ತದೆ. ಬಹುಶಃ ಅದಕ್ಕೆಯೇ ರಾಜಶೇಖರ ಮತ್ತು ನರಸಿಂಹನಾಯಕನಿಗೆ ಕಾದಂಬರಿಯಲ್ಲಿ  ಸಿಕ್ಕಷ್ಟು ಪ್ರಾಶಸ್ತ್ಯ ಪೆದ್ದರಾಯನಿಗೆ ಸಿಕ್ಕಿಲ್ಲ. ಒಂದೇ ವರುಷದಲ್ಲಿ ನರಸಿಂಹನಾಯಕ ರಾಜನಾಗಿ ಸಾಳುವ ವಂಶದ ಅಧಿಪತ್ಯ ಸ್ಥಾಪಿಸಿದುದು ನಿಜ ಸಂಗತಿ.

ಪುಷ್ಟಿ ಕೊಡುವ ಪಾತ್ರಗಳು - 

ಪ್ರೇಮಾನುರಾಗಿಗಳಾಗಿ ರಾಜಶೇಖರ-ಹೇಮಾಂಬಿಕೆ ಮತ್ತು ದಿಲಾವರ್ ಖಾನ್-ರೋಷನಾ, ಕಾಮುಕ-ವ್ಯಸನಿಯಾಗಿ ವಿರುಪಾಕ್ಷರಾಯ, ಮುಂಗೋಪಿಯಾಗಿ ಪೆದ್ದರಾಯ, ಮಮತೆಯ ಮೂರ್ತಿಯಾಗಿ ಗೌರಾಂಬಿಕೆ, ಸಮಚಿತ್ತ ಬುದ್ಧಿಕುಶಲನಾಗಿ ನರಸಿಂಹನಾಯಕ ಹೀಗೆ ವಿವಿಧ ಸ್ವಭಾವ ಹೊಂದಿರುವ ವಿವಿಧ ಪಾತ್ರಗಳೊಂದಿಗೆ ಕಥೆ ರಸವತ್ತಾಗಿದೆ.