Wednesday, December 18, 2013

ದೇವಸ್ಥಾನದ ಸುತ್ತ ನಾಲ್ಕನೇಯ ಪ್ರದಕ್ಷಿಣೆ

ನಾಲ್ಕನೇಯ ಪ್ರದಕ್ಷಿಣೆ ಪ್ರಾರಂಭಿಸುವಾಗ ನನ್ನ ಗಮನಕ್ಕೆ ಬಂದದ್ದು  ದೇವಸ್ಥಾನಗಳ ಮುಖ್ಯದ್ವಾರ ಅಥವಾ ಮಹಾದ್ವಾರ ಅಥವಾ ವಿಮಾನ ಗೋಪುರಗಳ ಎದುರುಗಡೆ, ಅಲ್ಲಿ ಜರಗುವ ವಿಭಿನ್ನ ದೃಶ್ಯಗಳ ಕಡೆಗೆ. ಅಲ್ಲಿಗೆ ನಮ್ಮ ಜನರಿಗೆ ದೇವರ ಮೇಲೆ ಇರುವ ಭಕ್ತಿಯ ಬಗ್ಗೆ ನನಗೆ ಒಂದು ಗೊಂದಲ ಶುರುವಾಯಿತು. ವಿಷಯ ಏನಪ್ಪಾ  ಅಂದರೆ  ಕೆಲವು ಜನ ರಸ್ತೆಯಲ್ಲಿ ಕಾಲ್ನಡಿಗೆಯಲ್ಲಿ ನಡೆದುಕೊಂಡೆ ಸಾಗಲಿ ಅಥವಾ ವಾಹನದ ಮೇಲೆ ಸವಾರಿ ಮಾಡಿಕೊಂಡೆ ಹೋಗಲಿ, ದೇವಸ್ಥಾನ  ಕಂಡ  ತಕ್ಷಣ ಭಕ್ತಿ ಪರವಶರಾಗಿ ಬಿಡುತ್ತಾರೆ.  ನಡೆದುಕೊಂಡು ಹೋಗುವವರು ದೇವಸ್ಥಾನದ ಹತ್ತಿರ ಬಂದ ಕೂಡಲೇ ಅದರ ಮುಂದೆ, ಅಂದರೆ ಗರ್ಭ ಗುಡಿಯಲ್ಲಿರುವ ಮುಖ್ಯ ದೇವರ ಮೂರ್ತಿ ಸರಿಯಾಗಿ ಕಾಣುವ ಹಾಗೆ ನಿಂತುಕೊಳ್ಳುತ್ತಾರೆ.  ನಂತರ ತಮ್ಮ ಪಾದಗಳನ್ನು ಇಲ್ಲಿಗೆ ಬರುವವರೆಗೂ ಬಲು ಮುತವರ್ಜಿಯಿಂದ ರಕ್ಷಿಸಿಕೊಂಡು ಬಂದಿರುವ ಪಾದರಕ್ಷೆಗಳನ್ನು ತ್ಯಜಿಸಿ ತಮ್ಮ ಮುಂದೆ ಇಡುತ್ತಾರೆ. ಆಮೇಲೆ ಕಣ್ಣು ಮುಚ್ಚಿ, ಎರಡು ಕೈ ಜೋಡಿಸಿ ನಮಸ್ಕರಿಸಿ ದೇವರಿಗೆ ಏನಾದರೂ ಬೇಡಿಕೊಳ್ಳುವದಿದ್ದರೆ ಬೇಡಿಕೊಂಡು, ತಮ್ಮ ಕಿರು ಪ್ರಾರ್ಥನೆ ಸಲ್ಲಿಸುತ್ತಾರೆ. ಇಷ್ಟೆಲ್ಲಾ ಆಗುವವರೆಗೆ ಆ ದೇವರು ಮತ್ತು ಈ ಭಕ್ತರ ನಡುವೆ ಕೇವಲ ಇವರ ಪಾದರಕ್ಷೆ ಮಾತ್ರ ಇವೆ ಅಂದುಕೊಳ್ಳುವ ಹಾಗಿಲ್ಲ ಅಲ್ಲಿ ಇನ್ನು ಹತ್ತಾರು ಜನ ಸಾಗಿ ಹೋಗಿರುತ್ತಾರೆ. ಈ ಹತ್ತಾರು ಜನರಲ್ಲಿ ಆರ್ಚಕರು, ದೇವಸ್ಥಾನಕ್ಕೆ ಬರುವ ಭಕ್ತರು, ದೇವರ ನಂಬದೇಯಿರುವ ನಾಸ್ತಿಕರು, ಅನ್ಯ ಧರ್ಮೀಯರು ಹೀಗೆ ಯಾರು ಯಾರೋ ಇರುತ್ತಾರೆ. ಅವರೆಲ್ಲ ಇವರ ಪ್ರಾರ್ಥನೆಗೆ ಸ್ವಲ್ಪ ಅಡಚಣೆ ಮಾಡಿದರೂ ಕೂಡ ಇವರು ಬೇಜಾರು ಮಾಡಿಕೊಳ್ಳುವದಿಲ್ಲ. ಯಾಕೆಂದರೆ ಇವರಿಗೆ ಬೇರೆ ಕಡೆ ಎಲ್ಲೋ ಕೆಲಸದ ಪ್ರಯುಕ್ತ ಹೋಗುವ ಅವಸರ. ದೇವಸ್ಥಾನದ ಒಳಗಡೆ ಹೋಗಿ ಘಂಟಾನಾದ ಮೊಳಗಿಸಿ, ಹೂವು-ಹಣ್ಣು ಕೊಟ್ಟು, ಪೂಜೆ ಸಲ್ಲಿಸಿ, ಮಂಗಳಾರತಿ ಮಾಡಿಸಿ, ದೇವರಿಗೆ ನಮಸ್ಕರಿಸಿ, ತೀರ್ಥ-ಪ್ರಸಾದ ಸ್ವೀಕರಿಸಿ, ಆರತಿ ತಟ್ಟೆಗೆ ದಕ್ಷಿಣೆ ಇಟ್ಟು, ಪ್ರದಕ್ಷಿಣೆ ಹಾಕಿ ಬರುವಷ್ಟು ಪರುಸೊತ್ತಿಲ್ಲ. (ಹೊರಗಡೆನೇ ನಿಂತು ನಮಸ್ಕರಿಸುವದರ ಇನ್ನೊಂದು ಲಾಭವೆಂದರೆ ಮಂಗಳಾರತಿ ತಟ್ಟೆಗೆ ದಕ್ಷಿಣೆ ರೂಪದಲ್ಲಿ ಇಡುವ ಒಂದು ಅಥವಾ ಎರಡು ರೂಪಾಯಿ ನಾಣ್ಯದ ಉಳಿತಾಯ ಕೂಡ ಇರಬಹುದು.) ಇವರು ದಾರಿ ಮಧ್ಯದಲ್ಲಿ ನಿಂತು ಈ ರೀತಿ ಮಾಡುವದರಿಂದ ಬೇರೆಯವರಿಗೆ ಇವರಿಂದ ಒಂದೆರಡು ನಿಮಿಷ ತೊಂದರೆಯಾದರೂ ಕೂಡ  ಅದನ್ನು ಇವರು ತಲೆಗೆ ಹಾಕಿಕೊಳ್ಳುವದಿಲ್ಲ. ಇವರ ಭಕ್ತಿಯನ್ನು ಕಂಡು ದಾರಿಹೋಕ ಜನರೇ  ಇವರಿಗೆ ತೊಂದರೆಯಾಗದಿರಲಿ ಎಂದುಕೊಂಡು ಈ ಹೊರಗಡೆಯ ಭಕ್ತ ಮತ್ತು ಆ ಒಳಗಡೆಯ ದೇವರ ಮಧ್ಯ ಬರದೆ ತಮ್ಮ ಪಥವನ್ನು ಬದಲಿಸಿ ಮುಂದೆ ಸಾಗುತ್ತಾರೆ.

ಇನ್ನು ಇದೇ ಗುಂಪಿಗೆ ಸೇರಿದ ವಾಹನ ಸವಾರರ ಭಕ್ತಿ ಅಥವಾ ನಮಸ್ಕರಿಸುವ ವಿಧಾನ ಇನ್ನೂ ಒಂದು ಹಂತ ಕೆಳಗಿನದು. ಯಾಕೆಂದರೆ ಇವರು ನಿಂತುಕೊಳ್ಳುವದೂ ಇಲ್ಲ, ಪಾದರಕ್ಷೆಗಳನ್ನು ಬಿಡುವುದೂ ಇಲ್ಲ, ನಮಸ್ಕರಿಸಲು ಎರಡೂ ಕೈಗಳನ್ನು  ಬಳಸುವದೂ ಇಲ್ಲ, ವಾಹನದಿಂದ ಕೆಳಗೆ ಇಳಿಯುವದಂದತೂ ಸಾಧ್ಯವೇ ಇಲ್ಲ. ಯಾಕೆಂದರೆ ಇವರ ಅವಸರ ಕಾಲ್ನಡಿಗೆ ಭಕ್ತರಿಗಿಂತ ಹೆಚ್ಚು. ದ್ವಿಚಕ್ರ ವಾಹನ ಓಡಿಸುವ ಈ ಭಕ್ತರು ತಮ್ಮ ಬಲಗೈಯಲ್ಲಿ ಇರುವ ವೇಗವರ್ಧಕ (accelerator) ಒಂದೆರಡು ಕ್ಷಣ ಬಿಟ್ಟು ಹಣೆ ಮತ್ತು ಎದೆ ಮುಟ್ಟಿಕೊಂಡರೆ ಅದೇ ಧೀರ್ಘ ದಂಡ ನಮಸ್ಕಾರವಾಯಿತು. ಇನ್ನು ಕೆಲವರಂತು ಯಾವುದೇ ಕೈಯನ್ನು ಎತ್ತದೇ ಬರಿ ತಲೆಯನ್ನು ದೇವರ ಕಡೆ ತಿರುಗಿಸಿ ಅರೆಕ್ಷಣ ಸ್ವಲ್ಪ ಬಾಗಿಸಿ ಮತ್ತೆ ತಲೆ ನೆರವಾಗಿ ರಸ್ತೆ ಕಡೆಗೆ ತಿರುಗಿಸುವರು, ಅವರಿಗೆ ಆ ಭಕ್ತಿಯೇ ಸಾಕಷ್ಟು ಆಯಿತು.  

ನಾಲ್ಕನೇಯ  ಪ್ರದಕ್ಷಿಣೆ ಇನ್ನು ಮುಂದೆವರಿದಿದೆ ಸಧ್ಯದಲ್ಲೇ ಮುಗಿಸುವೆ ... 


ದೇವಸ್ಥಾನದ ಸುತ್ತ ಮೊದಲೆರಡು ಪ್ರದಕ್ಷಿಣೆಗಳು

ದೇವಸ್ಥಾನಗಳು ನಮ್ಮ ಸಮಾಜದಲ್ಲಿ ಒಂದು ವಿಶಿಷ್ಟ ಸ್ಥಾನ ಪಡೆದಿದೆ, ಆದರೆ ದೇವಸ್ಥಾನ ಎಂದ ತಕ್ಷಣ ಎಲ್ಲರಿಗೂ, ಎಲ್ಲ ಕಾಲಕ್ಕೂ ಭಕ್ತಿಭಾವವೇ ಬರುವುದು ಅಂತ ಹೆಳಲಿಕ್ಕಾಗಲ್ಲ. ಬೇರೆ ಬೇರೆ ವ್ಯಕ್ತಿಗಳಿಗು, ಬೇರೆ ಬೇರೆ ಸಮಯದಲ್ಲಿ ದೇವಸ್ಥಾನವನ್ನು ಬೇರೆ ಬೇರೆ ದೃಷ್ಟಿಯಿಂದ ಕಾಣುತ್ತಾರೆ. ಬನ್ನಿ ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕುತ್ತ ಯಾರ್ಯಾರು ಯಾವ್ಯಾವ ದೃಷ್ಟಿ ಹರಿಸುತ್ತಾರೆ ನೋಡೋಣ. 

ನಮ್ಮ ಜನರಲ್ಲಿ ದೇವಸ್ಥಾನದ ಬಗ್ಗೆ ಎಷ್ಟು ಗೌರವ, ಭಕ್ತಿಯಿದೆಯೋ ಅಷ್ಟೇ ಭಯ ಕಿರಿಕಿರಿ ಕೂಡ ಇದೆ. ಇಲ್ಲೀಗ ನಾನು ಎರಡು ವಿಷಯಗಳ ಪ್ರಸ್ತಾಪ ಮಾಡಲು ಬಯಸುತ್ತೇನೆ. ಮೊದಲನೆಯದಾಗಿ, ನಾನೊಮ್ಮೆ ಬಾಡಿಗೆಗಾಗಿ ಮನೆ ಹುಡುಕುತ್ತಿದ್ದಾಗಗಿನ ನಾನೊಂದು ಮನೆಯನ್ನು ಇಷ್ಟಪಟ್ಟಿದ್ದೆ. ಆ ಮನೆ ದೇವಸ್ಥಾನಕ್ಕೆ ತುಂಬಾ ಹತ್ತಿರ, ಅಂದರೆ ದೇವಸ್ಥಾನದ ಎದುರುಗಡೆಯೇ ಇತ್ತು. ಮನೆ ತುಂಬಾ ಚೆನ್ನಾಗೇ ಇತ್ತು ಅಲ್ಲದೆ ನೆಲ ಮಹಡಿಯಾದ್ದರಿಂದ ಮನೆ ಮುಂದೆನೆ ವಾಹನ ನಿಲ್ಲಿಸಲು ಸಾಕಷ್ಟು ಜಾಗ ಕೂಡ ಇತ್ತು. ಮನೆ ಮಾಲೀಕರು ಪೋಲಿಸ್ ಅಧಿಕಾರಿಯಾದರೂ ಕೂಡ ತುಂಬಾ ಸಭ್ಯ ವ್ಯಕ್ತಿ. ಬಾಡಿಗೆ ಕೂಡ ನನ್ನ ಬಜೆಟ್ ನಲ್ಲಿ ಕೂರುವಂಥದ್ದು. ದೇವಸ್ಥಾನ ಹತ್ತಿರವಿದ್ದರೆ ಒಳ್ಳೆಯದು ಮತ್ತು ಶುಭ ಅಂದುಕೊಂಡು ನಾನು ಸಾವಿರ ರೂಪಾಯಿ ಟೋಕನ್ ಅಡ್ವಾನ್ಸ್ ಕೊಟ್ಟು  ಶೀಘ್ರದಲ್ಲೇ ಮಿಕ್ಕ ಠೆವಣಿ ಹಣ ಕೊಡುತ್ತೇನೆ ಎಂದು ಹೇಳಿದೆ.  ಮನೆ ಹುಡುಕುವ ಕೆಲಸ ಇಲ್ಲಿಗೆ ಮುಗಿಯಿತು ಅಂತ ಸಂತೋಷ ಮತ್ತು ನೆಮ್ಮದಿಯಿಂದ ಅಲ್ಲಿಂದ ಹೊರಟೆ. ನಮ್ಮ ತಾಯಿಗೆ ಈ ವಿಷಯ ತಿಳಿಸೋಣ ಅಂತ ಯೋಚಿಸಿ ಅವರ ದೂರವಾಣಿಗೆ ಕರೆಮಾಡಿದೆ, ಆಗ ನಮ್ಮಮ್ಮ ಎಲ್ಲ ವಿವರ ಕೇಳಿದ ಮೇಲೆ ತಿರ್ಮಾನ ಹೇಳಿದರು, ಆ ಮನೆ ಬೇಡ ಅಂತ. ಯಾಕೆಂದರೆ ದೇವಸ್ಥಾನದ ಎದುರುಗಡೆ ಮನೆಯಿರಬಾರದು ಅಂತ. ಅದು ಶಕುನವೋ, ಅಪಶಕುನೋ, ಮೂಢನಂಬಿಕೆಯೂ, ಅಪನಂಬಿಕೆಯೋ ಗೊತ್ತಿಲ್ಲ, ಅಮ್ಮನ ನಿರ್ಧಾರ ಮಾತ್ರ ಅಚಲ, ಮತ್ತೆ ನಾನೂ ಕೂಡ ಅಮ್ಮನ ಮಾತು ಮೀರಿ ಹೋಗುವದಿಲ್ಲ. ಇಷ್ಟಕ್ಕೆ ನನ್ನ ಸಾವಿರ ರೂಪಾಯಿ ನೀರಲ್ಲಿ ಹೋಯಿತು ಅಲ್ಲದೆ ನನ್ನ ಮನೆ ಹುಡುಕುವ ಗೋಳು ಮತ್ತೆ ಶುರುವಾಯಿತು.

ಇನ್ನು ಎರಡನೇಯದಾಗಿ ಹೇಳಬೇಕೆಂದರೆ, ನನ್ನ ಸಹೋದ್ಯೋಗಿ ಒಬ್ಬರು ಬಾಡಿಗೆ ಮನೆಯಲ್ಲಿದ್ದು ಬೇಸತ್ತು ಒಂದು ಮನೆ ಅಥವಾ ನಿವೇಶನ ಖರೀದಿಸಬೇಕು, ಅಲ್ಲದೆ ಕೂಡಿಟ್ಟ ಹಣ ನಿಯೋಗಿಸಲು ಇದು ಉತ್ತಮ ಹೂಡಿಕೆ ಅಂತ ತುಂಬಾ ದಿನಗಳಿಂದ ಅಲೆದಾಡತಾಯಿದ್ದರು. ಅವರಿಗೆ ಯಾರೋ ಒಬ್ಬರು ಒಂದು ಒಳ್ಳೆಯ ದರದ ಮನೆಯ ಮಾರಾಟದ ವಿಷಯ ತಿಳಿಸಿ ಅಲ್ಲಿಗೆ ಇವರನ್ನು ಕರೆದುಕೊಂಡು ಹೋಗಿ ತೋರಿಸಿಕೊಂಡೂ ಬಂದರು. ಅಲ್ಲಿಂದ ಬಂದ ಮೇಲೆ ಇವರು ಆ ಮನೆಯ ವಿಚಾರ ಅಲ್ಲಿಗೆ ಬಿಟ್ಟು ಬಿಟ್ಟರು. ಯಾಕೆ ಅಂತ ಕೇಳಿದರೆ ಇವರ ಉತ್ತರ, "ಮನೆ ದೇವಸ್ಥಾನದ ಪಕ್ಕದಲ್ಲಿದೆ". ಇಲ್ಲಿಯವರೆಗೆ ನಾನು ದೇವಸ್ಥಾನದ ಎದುರುಗಡೆ ಮನೆಯಿರಬಾರದು ಅಂತ ಮಾತ್ರ ಅಂದುಕೊಂಡ್ಡಿದ್ದೆ ಆದರೆ ಈಗ ಗೊತ್ತಾಯಿತು ಮನೆ ಪಕ್ಕದಲ್ಲಿಯೂ ಕೂಡ ದೇವಸ್ಥಾನವಿರಬಾರದು. ನಮ್ಮ ಸಹೋದ್ಯೋಗಿ ಆ ಮನೆ ತಿರಸ್ಕರಿಸುವದಕ್ಕೆ ಯಾವ ಶಕುನ ಅಥವಾ ನಂಬಿಕೆಯ ಕಾರಣಗಳಿರಲಿಲ್ಲ, ಆದರೆ ಒಂದು ಬಲವಾದ ಮತ್ತು ವಾಸ್ತವಿಕ ಕಾರಣವಿತ್ತು. ಅದೇನೆಂದರೆ ದೇವಸ್ಥಾನ ಹತ್ತಿರವಿದ್ದರೆ ಹಬ್ಬ ಹರಿದಿನಗಳಲ್ಲಿ ತುಂಬಾ ಗದ್ದಲವಿರುತ್ತದೆ, ಶಬ್ದವಾಗುತ್ತದೆ ಮತ್ತು ಗಲೀಜು ಕೂಡ ಆಗುತ್ತದೆ.


ಅಲ್ಲಿಗೆ ನನ್ನ ಮನಸ್ಸು ಮಂಥನ ಮಾಡೋಕ್ಕೆ ಶುರುವಿಟ್ಟುಕೊಂಡಿತು, ಪ್ರಶ್ನೆಗಳು ಉದ್ಭವಿಸತೊಡಗಿದವು. ಜನರಿಗೆ ದೇವಸ್ಥಾನ ಬೇಕು ಆದರೆ ಅದು ಮನೆ ಅಕ್ಕ-ಪಕ್ಕ ಅಥವಾ ಎದುರುಗಡೆ ಇರಬಾರದು ಅಷ್ಟೇಯೇಕೆ ಹತ್ತಿರವೇ ಇರಬಾರದು. ಇನ್ನು ತುಂಬಾ ದೂರ ಕೂಡ ಇರಬಾರದು ಯಾಕೆಂದರೆ ಹೋಗಿ ಬರುವದಕ್ಕೆ ಕಷ್ಟವಾಗುತ್ತದೆ. ದೇವಸ್ಥಾನದಲ್ಲಿ ವಿಗ್ರಹಗಳಿರಬೇಕು ಆದರೆ ಮನೆಯಲ್ಲಿ ದೇವರ ಶಿಲಾ ಪ್ರಥಿಮೆಗಳಿರಬಾರದು. ದೇವರು ಎಲ್ಲೆಡೆ ಇರುವನು ಆದರೆ ನಾವು ಅವನಿಗೆ ಒಂದು ದೇವಸ್ಥಾನ ಕಟ್ಟಿಸಿ ಅವನನ್ನು ಸ್ತಿಮಿತಗೊಳಿಸುತ್ತೇವೆ ಮತ್ತೆ ನಾವೇ ಕಟ್ಟಿಸಿದ ಆ ದೇವಸ್ಥಾನದ ಹತ್ತಿರ ನಮ್ಮ ಮನೆ ಮಾಡುವದಿಲ್ಲ. ದೇವಸ್ಥಾನದಲ್ಲಿ ಶಬ್ದ ಮಾಡುವವರು ನಾವೇ, ಮತ್ತೆ ಶಬ್ದ  ಜಾಸ್ತಿಯಾಗುತ್ತದೆ ಅನ್ನುವವರು ನಾವೇ. ಯಾಕೆ? ಯಾಕೆ ಹೀಗೆ? 


ದೇವಸ್ಥಾನದಿಂದ ದೂರ ದೂರಯಿರುತ್ತ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ನನ್ನ ಮೊದಲ ಪ್ರದಕ್ಷಿಣೆ ಮುಗಿಸಿದೆ. ಬನ್ನಿ ಈಗ ಎರಡನೇಯ ಪ್ರದಕ್ಷಿಣೆಯೊಂದಿಗೆ ಎರಡನೆಯ ವಿಷಯ ಎತ್ತಿಕೊಳ್ಳೋಣ.


ಬೆಂಗಳೂರಿನ BEL ವಲಯದಿಂದ ಸ್ವಲ್ಪ  ಮುಂದೆ ಹೋದರೆ, ಅಲ್ಲಿ ಗಂಗಮ್ಮ ವೃತ್ತ ಅಂತ ಒಂದು ಪ್ರದೇಶವಿದೆ. ಈ ವೃತ್ತಕ್ಕೆ ಗಂಗಮ್ಮನ ನಾಮಕರಣ ಯಾಕಾಗಿರಬೇಕು ಅಂತ ಯೋಚಿಸಿದಾಗ ನನ್ನ ತಲೆಗೆ ಹೊಳೆದಿದ್ದೆನೆಂದರೆ,  ಯಾರೋ ಒಬ್ಬ ಸಮಾಜ ಸೇವೆ ಮಾಡಿರುವ ಮಹಿಳೆಯ ಹೆಸರು ಈ ವೃತ್ತಕ್ಕೆ ಇಟ್ಟಿರಬೇಕು ಎಂದು. ಹೀಗೆಯೇ ವಿಚಾರಮಾಡಲು ನನ್ನ ಹತ್ತಿರ ಒಂದು ಬಲವಾದ ಕಾರಣವಿದೆ. ನಮ್ಮ ಮನೆಯ ಹತ್ತಿರ ಗಂಗಮ್ಮ-ತಿಮ್ಮಯನವರ ಮನೆ ಮತ್ತು ಕಲ್ಯಾಣ ಮಂಟಪವಿದೆ. ಅದರ ಬದಿಯ ರಸ್ತೆಗೆ ತಿಮ್ಮಯ್ಯ ರಸ್ತೆ ಅಂತ ಹೆಸರಿಡಲಾಗಿದೆ. ಹೇಗೆ ತಿಮ್ಮಯ್ಯನವರ ಸೇವೆ ಮೆಚ್ಚಿ ಇಲ್ಲಿಯ ಜನರು ಈ ರಸ್ತೆಗೆ ಅವರ ಹೆಸರಿಟ್ಟರಬಹುದೋ ಹಾಗೆಯೇ ಗಂಗಮ್ಮನವರ ಸೇವೆ ಮೆಚ್ಚಿ ಅಲ್ಲಿಯ ಜನ ಆ ಹೆಸರಿಟ್ಟರಬಹುದು  ಎಂದು ಅಂದುಕೊಂಡೆ. ಆದರೆ ಆ ವೃತ್ತದ ಪಕ್ಕದಲ್ಲಿ ಒಂದು ಫಲಕದ ಮೇಲೆ ಈ ರೀತಿ ಬರೆದಿತ್ತು "ಗಂಗಮ್ಮ ವೃತ್ತ, ಗಂಗಮ್ಮನ ಗುಡಿಗೆ ದಾರಿ" ಜೊತೆಗೆ ಮಾರ್ಗದರ್ಶನಕ್ಕಾಗಿ ಒಂದು ಬಾಣದ ಗುರುತುಯಿತ್ತು. ಅಲ್ಲಿಗೆ ನನಗೆ ಸ್ಥಳದ ಕೊಂಚ ಪರಿಚಯವಾದಂತಾಯಿತು ಮತ್ತೆ ನನ್ನ ಊಹೆಯೂ ತಪ್ಪು ಎಂದು ಗೊತ್ತಾಯಿತು.


ಗಂಗಮ್ಮನ ದೇವಸ್ಥಾನವನ್ನು ನೋಡೇ ಬಿಡೋಣವೆಂದು ಬಾಣದ ಚಿನ್ಹೆಯ ಕಡೆಗೆ ನಾನು ಹೆಜ್ಜೆ ಹಾಕಿದೆ. ನಾನು ಹತ್ತಿಪ್ಪತ್ತು ಅಡಿ ಮುಂದೆ ಹೋದ ಮೇಲೆ ನನಗೆ ಒಂದು ಆಶ್ಚರ್ಯಕಾದಿತ್ತು, ಅಲ್ಲಿ ರಸ್ತೆಯ ಕೊನೆಯಲ್ಲಿ ಒಂದು ಎಕರೆಯಷ್ಟು ಆಗುವ ದೊಡ್ಡ ಜಾಗದಲ್ಲಿ  ಒಂದು ಇಗರ್ಜಿಯಿದೆ. ಇದೇನಿದು ಗಂಗಮ್ಮನ ದೇವಸ್ಥಾನ ಅಂತ ದಿಕ್ಕು ತೋರಿಸಿ ಆ ನಾಮಫಲಕ ನನಗೆ ದಿಕ್ಕು ತಪ್ಪಿಸಿತೆ ಅಂತ ಯೋಚಿಸ ತೊಡಗಿದೆ. ಆಚೆ ಇಚೆ ತಲೆಯೆತ್ತಿ ನೋಡಿದರೆ ಎಲ್ಲೂ ದೇವಸ್ಥಾನವಿರುವ ಗೋಪುರವೇ ಕಾಣುತ್ತಿಲ್ಲ. ಘಂಟಾನಾದ ಎಲ್ಲಾದರೂ ಕೆಳುವದೋ ಎಂದು ಕಿವಿ ಅಗಲಿಸಿ ಕೇಳಿದರೂ ಏನೂ ಕೇಳುತ್ತಿಲ್ಲ. ಇಗರ್ಜಿಯನ್ನು ಒಮ್ಮೆ ಗಮನವಿಟ್ಟು ನೋಡಿದೆ, ಅದರ  ಮುಂಭಾಗದಲ್ಲಿ ದೇವಸ್ಥಾನದ ಮುಂದೆಯಿರುವಂತೆ ಎರಡು ಹಿಂದು ಶೈಲಿಯ ದೀಪಸ್ತಂಭಗಳಿವೆ. ನನಗೆ ಒಂದು ತರಹದ ಗೊಂದಲವಾಯಿತು, ದೀಪ ಸ್ತಂಭದ ಹಿಂದೆ ಏನಾದರೂ ಗಂಗಮ್ಮನ ಗುಡಿಯಿದ್ದೀತಾ ಎಂದು ಗಮನಿಸಿದೆ, ಇಲ್ಲ ಅದು ಕ್ರೈಸ್ತ ಇಗರ್ಜಿಯೇ ಆಗಿತ್ತು ಹೊರತು ದೇವಸ್ಥಾನವಿರಲಿಲ್ಲ. ಆ ಕ್ಷಣಕ್ಕೆ ನನಗೆ ಕೇರಳದ ಇಗರ್ಜಿಗಳ ನೆನಪಾಯಿತು. ಅಲ್ಲಿಯೂ  ಕೂಡ ಇಗರ್ಜಿಯ ಮುಂದೆ ದೀಪಸ್ತಂಭಗಳಿರುವ ಪದ್ಧತಿಯಿದೆ. ಈಗ ನನಗೆ ಸ್ಪಷ್ಟವಾಯಿತು ಗಂಗಮ್ಮನ ನೋಡಲಿಕ್ಕೆ ನನಗೆ ಇನ್ನೂ ಸ್ವಲ್ಪ ದೂರ ನಡೆಯಬೇಕಾಗಿದೆ ಎಂದು, ಆದರೆ ಯಾವ ದಿಕ್ಕಿನಲ್ಲಿ ಸಾಗಬೇಕು ಗೊತ್ತಾಗುತ್ತಿಲ್ಲ ಎಲ್ಲೂ ಮಾರ್ಗದರ್ಶಕ ಫಲಕಗಳೇ ಇಲ್ಲ. ಅಲ್ಲೇ ಹೋಗುತ್ತಿದ್ದ ಒಬ್ಬ ದಾರಿಹೋಕರನ್ನು ವಿಚಾರಿಸಿದೆ. ಆಗ ಅವರು ಇಗರ್ಜಿಯ ಪಕ್ಕದಲ್ಲಿರುವ ಒಂದು ಚಿಕ್ಕದಾದ ದಾರಿಯನ್ನು ತೋರಿಸಿ ಅಲ್ಲಿ ಮುಂದೆ ಹೋಗಿ ನಿಮ್ಮ ಎಡಗಡೆಗೆ ದೇವಸ್ಥಾನ ಸಿಗುವದು ಎಂದು ಹೇಳಿದರು.


ಅವರು ಹೇಳಿದಂತೆ ನಾನು ಮಣ್ಣು ದಾರಿಯಲ್ಲಿ ನಡೆದುಕೊಂಡು ಮುಂದೆ ಸಾಗಿದೆ. ಆಗ ನನಗೆ ಕಂಡಿತು ಗಂಗಮ್ಮನ ಗುಡಿ. ಈ  ದೇವಸ್ಥಾನ ಆ ಇಗರ್ಜಿಯಷ್ಟು ದೊಡ್ದದಿರಲಿಲ್ಲ ಮತ್ತು ಇದರ ಸುತ್ತಮುತ್ತ  ಇಗರ್ಜಿಗಿರುವಷ್ಟು ವಿಶಾಲವಾದ ಪ್ರಾಂಗಣವೂ ಇಲ್ಲ. ಇಗರ್ಜಿಯು  ಸಂಪೂರ್ಣವಾಗಿ ನಿರ್ಮಾಣವಾಗಿ  ಸುಸಜ್ಜಿತವಾಗಿತ್ತು ಆದರೆ ಗಂಗಮ್ಮನ ಗುಡಿ ತುಂಬಾ ಪುರಾತನದ್ದಾದರೂ ಇನ್ನೂ ನವೀಕರಣದ ಹಾದಿಯಲ್ಲಿದೆ. ದೇವಸ್ಥಾನದ ಸುತ್ತ ದುರ್ಗೆ, ಪರಮೇಶ್ವರಿ, ಅಷ್ಟ ಲಕ್ಷ್ಮಿಯರ ವಿಗ್ರಹಗಳಿವೆ. ಆದರೆ ಪ್ರಾಂಗಣವಿನ್ನೂ ಸ್ವಚ್ಚಗೊಳಿಸಿಲ್ಲ, ಯಾಕೆಂದರೆ ನವೀಕರಣದ ಕೆಲಸ ಇನ್ನು ಸಾಗುತ್ತಿರುವದರಿಂದ ಅಲ್ಲಲ್ಲಿ ಕಲ್ಲು ಮಣ್ಣು ಬಿದ್ದಿವೆ. ಇಗರ್ಜಿಯ ಸ್ವಚ್ಛತೆ, ವಿಶಾಲತೆ, ಸುಸಜ್ಜಿತ ಕಟ್ಟಡ ಯಾವುದೂ ದೇವಸ್ಥಾನದಲ್ಲಿಲ್ಲ. ಸುತ್ತ ಮುತ್ತಲ ಪ್ರದೇಶವೆಲ್ಲ ಗಂಗಮ್ಮನ ಹೆಸರಿನಿಂದಲೇ ಗುರುತಿಸಲ್ಪಟ್ಟರೂ ಗಂಗಮ್ಮನ ದೇವಸ್ಥಾನದಲ್ಲಿ  ಇನ್ನೂ  ಸುಮಾರು ಕೆಲಸಗಳಾಗಬೇಕಿದೆ. ಒಂದೊಮ್ಮೆ ಎಲ್ಲ ನಿರ್ಮಾಣ ಕೆಲಸಗಳು ಮುಗಿದರೆ ಕೆತ್ತಿದ ಕಲ್ಲಿನ ಕಂಬಗಳಿಂದ ಅಲಂಕೃತಗೊಂಡು ದೇವಸ್ಥಾನ ತುಂಬಾ ಚೆನ್ನಾಗಿ ಕಾಣುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ ನಮ್ಮ ದೇವಸ್ಥಾನಕ್ಕೆ ಮತ್ತು ಇಗರ್ಜಿಗೆ ಇರುವ ವ್ಯತ್ಯಾಸ. ಗಂಗಮ್ಮ ಯಾವಾಗ ಅಶಿರ್ವದಿಸುತ್ತಾಳೋ ಗೊತ್ತಿಲ್ಲ, ಅವಳ ಕೃಪೆ ಎಲ್ಲರ ಮೇಲೆಯಿರಲಿ, ದೇವಸ್ಥಾನದ ನವೀಕರಣದ ಕೆಲಸ ಆದಷ್ಟು ಬೇಗನೆ ಮುಗಿಯಲಿ ಎಂದು ಬೇಡಿಕೊಳ್ಳುತ್ತಾ ಅವಳ ಪಾದಕ್ಕೆ ನ್ನನದೊಂದು ನಮಸ್ಕಾರ ಸಲ್ಲಿಸುತ್ತಾ ಎರಡನೇಯ ಪ್ರದಕ್ಷಿಣೆ ಮುಗಿಸುವೆ.


Monday, August 12, 2013

ದೇವಸ್ಥಾನದ ಸುತ್ತ ಮೂರನೆಯ ಪ್ರದಕ್ಷಿಣೆ

ಮೂರನೆಯ ಪ್ರದಕ್ಷಿಣೆಯಲ್ಲಿ ಹೇಳುವದೆನೆಂದರೆ ನಾನು ದೇವಸ್ಥಾನಕ್ಕೆ ಹೋಗುವುದು ಸ್ವಲ್ಪ ಕಡಿಮೆಯೆ. ನಾನ್ಯಾಕೆ ದೇವಸ್ಥಾನಕ್ಕೆ ಹೆಚ್ಚು ಹೋಗುವದಿಲ್ಲ ಅನ್ನುವುದೇ ನನ್ನ ಮೂರನೆಯ ವಿಷಯ. ನಾವು ದೇವಸ್ಥಾನಕ್ಕೆ ಹೋಗದೆಯಿರುವದು ಹಿಂದೂ ಧರ್ಮದ ದೌರ್ಬಲ್ಯವೋ ಅಥವಾ ವಿಶೇಷತೆಯೋ ನನಗೆ ತಿಳಿದಿಲ್ಲ. ತಿಳಿದವರು ನನಗೆ ಸ್ವಲ್ಪ ತಿಳಿಸಿ ಹೇಳಬೇಕು. 

ನನ್ನ ವಿಚಾರದಲ್ಲಿ ಈ ಅಂಶವನ್ನು ನಮ್ಮ ಹಿಂದು ಧರ್ಮದ ವಿಶೇಷತೆಯೆಂದು ಹೇಳಬಹುದು. ನಮ್ಮ ಪೂರ್ವಿಕರು ಮತ್ತು ಹಿರಿಯರು ಹೇಳುವದೆನೆಂದರೆ ದೇವಸ್ಥಾನವಿಲ್ಲದಿದ್ದರೂ ತೊಂದರೆಯಿಲ್ಲ, ಪೂಜಿಸುವ ಮೂರ್ತಿಯಿಲ್ಲದಿದ್ದರೂ ಪರವಾಗಿಲ್ಲ,  ನಾವು ಧಾರ್ಮಿಕ ಮತ್ತು ಆಧ್ಯಾತ್ಮಿಕವಾಗಿ ಬೆಳವಣಿಗೆ ಹೋ೦ದಬಹುದು ಎಂದು. ಇಷ್ಟಲಿಂಗ ಧರಿಸಿ ಕರಸ್ಥಲದಲ್ಲೇ ದೇವನನ್ನು ಪೂಜಿಸಬಹುದು ಎಂದು ಹೇಳಿದ್ದಾರೆ. ದೇವರು ಬೇಡ ಅವನ ಹಂಗೂ ಬೇಡ ಅವನ ನಾಮದ ಬಲವೊಂದಿದಿದ್ದರೆ ಸಾಕು ಎಂದಿದ್ದಾರೆ. ಬಾಲ ಪ್ರಹ್ಲಾದನ ಮೂಲಕ ದೇವರು ಎಲ್ಲೆಡೆಯೂ ಇರುವನು ಎಂದು ತೋರಿಸಿಕೊಟ್ಟಿದ್ದಾರೆ. ಇಷ್ಟಕ್ಕೂ ಇದೆಲ್ಲದರ ಅರ್ಥ, ದೇವರನ್ನು ನೀನು ಎಲ್ಲಿಯಾದರೂ ಕಾಣಬಹುದು ಮತ್ತು ನೀನೆಲ್ಲಿಯಿರುವೆಯೋ ಅಲ್ಲಿಯೇ ಅವನನ್ನು ಪೂಜಿಸು, ಭಜಿಸು ಎಂದು. ಅಂದರೆ ದೇವಸ್ಥಾನಕ್ಕೆ ಹೋಗಲೇಬೇಕು ಎನ್ನುವ ಅವಶ್ಯಕತೆಯೇನೂ ಇಲ್ಲ. ಇದು ನಮಗೆ ಕೊಟ್ಟ ಒಂದು ಸ್ವಾತಂತ್ರವಲ್ಲವೇ? ಇದು ನಮ್ಮ ಧರ್ಮದ ವಿಶೇಷತೆಯಲ್ಲವೇ? 


ಇದೆ ಅಂಶವನ್ನು ದೌರ್ಬಲ್ಯವೆಂದು ಯಾಕೆ ಹೇಳಬೇಕೆಂದರೆ ನಮ್ಮ ಧರ್ಮದಲ್ಲಿ ದೇವಸ್ಥಾನಕ್ಕೆ ಹೋಗಲೇಬೇಕು ಎಂದು ಯಾವುದೇ ಧಾರ್ಮಿಕ ಗುರು ಅಥವಾ ಸ್ವಾಮೀಜಿ ಅಥವಾ ಹಿರಿಯರು ಒತ್ತಾಯಿಸುವದಿಲ್ಲ. ಪ್ರಾರ್ಥನೆ ಕಡ್ಡಾಯವೆಂದು ನಿಯಮ ಹೇರುವದಿಲ್ಲ. ಶನಿವಾರ ಹನುಮನ ಗುಡಿಗೆ ಹೋಗಬೇಕು, ಸೋಮವಾರ ಶಿವಾಲಯಕ್ಕೆ ಹೋಗಲೇಬೇಕು ಎಂದು ಯಾರೂ ಕಟ್ಟಪ್ಪಣೆ ಹಾಕುವದಿಲ್ಲ. ಇದನ್ನೇ ಬಳಸಿಕೊಂಡು ನಮ್ಮ ಜನ ದೇವಸ್ಥಾನಕ್ಕೆ ಹೆಚ್ಚಾಗಿ ಹೋಗುವದಿಲ್ಲ. ಆದರೆ ನಾವು ದೇವಸ್ಥಾನಕ್ಕೆ ಹೋಗದೆಯಿದ್ದರೆ, ದೇವಸ್ಥಾನದ ಅಭಿವೃದ್ಧಿಯಾಗುವದಾದರು ಹೇಗೆ? ದೇವಸ್ಥಾನಗಳನ್ನು ಹಿಂದೆ ಯಾರೋ ಪುಣ್ಯಾತ್ಮರು ಕಟ್ಟಿಸಿರಬಹುದು ಆದರೆ ಅವುಗಳ ಇಂದಿನ ನಿರ್ವಹಣೆ ಮತ್ತು ಅಭಿವೃದ್ಧಿ ಸಾಗುವದು ಭಕ್ತಾದಿಗಳಿಂದ. ಭಕ್ತರು ದೇವಸ್ಥಾನಗಳಿಗೆ ಹೋಗಿ ಪೂಜೆ ಪುನಸ್ಕಾರಗಳ ಜೊತೆ ಕಾಣಿಕೆ ಮತ್ತು ಸೇವೆಗಳನ್ನು ಸಲ್ಲಿಸುವದರಿಂದ. ಕಾಣಿಕೆಯು ನಗ ನಾಣ್ಯಗಳಾಗಿರಬಹುದು ಅಥವಾ ದೇವಕಾರ್ಯಕ್ಕೆ ಉಪಯೋಗಿಸುವ ವಸ್ತುಗಳಾಗಿರಲೂಬಹುದು. ಇದೆಲ್ಲ ಇಲ್ಲದಿದ್ದರೆ ದೇವಸ್ಥಾನ ಬೆಳೆಯುವದಾದರೂ ಹೇಗೆ ಬೆಳೆಯುವದು ಬಿಡಿ ದಿನ ನಿತ್ಯದ ವಿಧಿ ವಿಧಾನಗಳನ್ನು ನಿರ್ವಹಿಸುವದು ಕಷ್ಟ. ಈ ರೀತಿಯಾಗಿ ವಿವೇಚಿಸಿದಾಗ ಇದು ಹಿಂದು ಧರ್ಮದ ದೌರ್ಬಲ್ಯವೆಂದು ಕಾಣಬಹುದಲ್ಲವೇ?


ಇಷ್ಟಕ್ಕೂ ನಾವು ದೇವಸ್ಥಾನಗಳನ್ನು ಯಾಕೆ ಬೆಳೆಸಬೇಕೆಂದರೆ, ಧರ್ಮವನ್ನು ರಕ್ಷಿಸುವಲ್ಲಿ ದೇವಸ್ಥಾನಗಳೇ ಮುಖ್ಯ ಪಾತ್ರವಹಿಸುತ್ತವೆ. ಇನ್ನು ಧರ್ಮ ರಕ್ಷಣೆಯಾಕಾಗಬೇಕು ಅಂದರೆ ಅದು ನಮ್ಮ ಸ್ವಂತ ರಕ್ಷಣೆಗೋಸ್ಕರವೇ ಹೊರತು ಬೇರೆಯೇನೂ ಅಲ್ಲ. ಯಾಕೆಂದರೆ "ಧರ್ಮೋ ರಕ್ಷತಿ ರಕ್ಷಿತ:" ಎಂದು ಸನಾತನಿಗಳು ಹೇಳಿದ್ದಾರೆ. ಅದಕ್ಕಾಗಿ ನಾನು ದೇವಸ್ಥಾನಕ್ಕೆ ಹೋಗುವದು ಕಡಿಮೆಯಾದರೂ ಕೂಡ, ಹೋದಾಗೊಮ್ಮೆ ಹುಂಡಿಗೆ ನನ್ನ ಕೈಲಾದಷ್ಟು ಕಾಣಿಕೆಯನ್ನು ಹಾಕಿಬರುತ್ತೇನೆ. ನಮ್ಮ ದೇವಸ್ಥಾನಗಳಿಗೆ ನಾವಲ್ಲದೇ ಬೇರಾರು ಸಹಾಯ ಮಾಡಿಯಾರು? ನೀವು ಕೂಡ ಕಾಣಿಕೆ ಹುಂಡಿಗೆ ನಿಮ್ಮ ಕೈಲಾದಷ್ಟು ಹಣವನ್ನು ಹಾಕಿರಿ. ಹುಂಡಿಯವರೆಗೆ ಬರುವಷ್ಟರಲ್ಲಿ ನನ್ನ ಮೂರನೆಯ ಪ್ರದಕ್ಷಿಣೆ ಮುಗಿಯಿತು.

Wednesday, August 7, 2013

ಮನಸು

ನನ್ನ ಮನಸ್ಸು ಹೇಗಿದೆ ಅಂದರೆ, ಅದೊಂಥರಾ ವಿಚಿತ್ರ. ಈಗ ಸಮಯ ಇದೆ, ಏನೂ ಕೆಲಸವಿಲ್ಲ,  ಏನಾದರು ಬರೆಯೋಣ ಅಂತ ಕುಳಿತರೆ, ತಲೆಗೆ ಏನು ಬರೆಯಬೇಕು ಅಂತ ಹೊಳೆಯೋದೆಯಿಲ್ಲ. ಬ್ಲಾಗ್ ನಲ್ಲಿ  ಕನ್ನಡ ಬರಹ ಲಿಪಿ ತೆರೆದಿಟ್ಟು ವಿಚಾರ ಮಾಡ್ತಾ ಶೂನ್ಯದೆಡೆಗೆ ನೋಡುತ್ತಾ ಕುಳಿತುಕೊಳ್ಳೋದೇ ಆಗುತ್ತದೆ. ಇನ್ನು ಕೆಲವೊಂದು ಸಾರಿ ಪ್ರಯಾಣ ಮಾಡುವಾಗ ಅಥವಾ ಯಾವುದೊ ಔತಣ ಕೂಟದಲ್ಲಿ(ಪಾರ್ಟಿಯಲ್ಲಿ) ಇದ್ದಾಗ ಅಥವಾ ಇನ್ನ್ಯಾರ ಜೊತೆಗೋ ಏನೋ ಸಂಭಾಷಣೆ ನಡೆಸುವಾಗ ಕೆಲವೊಂದು ವಿಷಯಗಳು ತುಂಬಾ ಸ್ವಾರಸ್ಯಕರಯೆನಿಸಿ ಅದರ ಬಗ್ಗೆ ಬರೆಯಬೇಕು ಅನಿಸುತ್ತದೆ ಆದರೆ ಆಗ ಲೇಖನಿ-ಪೇಪರ್ರೂ ಇರಲ್ಲ, ಬ್ಲಾಗ್ ನಲ್ಲಿ ಇಳಿಸೋಣವೆಂದರೆ ಲ್ಯಾಪ್ ಟಾಪ್ ಕೂಡ ಇರಲ್ಲ. ಎಲ್ಲೋ ಕಂಡ ಸನ್ನಿವೇಶ ಅಥವಾ ಘಟನೆಗಳನ್ನು ಬರಹಕ್ಕಿಳಿಸೋಣವೆಂದರೆ ನಂತರ ಆ ವಿಷಯ ಕೂಡ ಮರೆತು ಹೋಗುತ್ತದೆ. ಮತ್ತೆ ಅದೇ ರಾಗ, ಅದೇ ಹಾಡು.

ಕಥೆ ಕಾದಂಬರಿ ಓದುವಾಗ ಮನಸ್ಸು ಕಥಾನಕದ ಪಾತ್ರಧಾರಿಯಾಗಿ ಒಮ್ಮೆ ನಲಿದರೆ ಇನ್ನೊಮ್ಮೆ ತಾನೇ ಸ್ವತ: ಕಥೆಗಾರನಾಗಿ ಲೇಖಕನ ಬರಹದ ಶೈಲಿಯನ್ನು ಗಮನಿಸಿ ವಿಶ್ಲೇಷಿಸತೊಡಗುತ್ತದೆ. ಈ ಶೈಲಿ ಚೆನ್ನಾಗಿದೆ ನಾನು ಇದನ್ನೇ ಅಳವಡಿಸಿಕೊಳ್ಳಬೇಕು ಅಥವಾ ಲೇಖಕ ಈ ರೀತಿ ಬರೆಯೋದಕ್ಕಿಂತ ಹಾಗೆ ಬರೆದರೆ ಚೆನ್ನಾಗಿತ್ತು ಎಂದು ಅನಿಸುತ್ತದೆ. ಈ ಮನಸ್ಸೇ ವಿಚಿತ್ರ, ಅದ್ಯಾಕೆ ಹೀಗಿದೆಯೊ? ನನ್ನ ಮನಸ್ಸಷ್ಟೇ ಹೀಗೋ ಅಥವಾ ನಿಮ್ಮದೂ ಕೂಡ ಹೀಗೆನಾ? ನಿಮಗೂ ಹೀಗೆ ಆಗಿದೆಯಾ?

Wednesday, January 30, 2013

ಬೇಂದ್ರೆಯವರ ಜನುಮ ದಿನದ ಸ್ಮರಣಾರ್ಥ

ಮೂಡಲ ಮನೆಯ ಮುತ್ತಿನ ನೀರಿನ
ಎರಕಾವ ಹೊಯ್ದ, ನುಣ್ಣನೆ ಎರಕಾವ ಹೊಯ್ದ
ಬಾಗಿಲ ತೆರೆದು ಬೆಳಕು ಹರಿದು
ಜಗವೆಲ್ಲಾ ತೊಯ್ದ, ದೇವನು ಜಗವೆಲ್ಲ ತೊಯ್ದ
ಎಲೆಗಳ ಮೆಲೆ, ಹೂಗಳ ಒಳಗೆ
ಅಮೃತದಾ ಬಿಂದು, ಕಂಡವು ಅಮೃತದಾ ಬಿಂದು
ಯಾರಿರಿಸಿಹರು ಮುಗಿಲಿನ ಮೇಲಿಂದ
ಇಲ್ಲಿಗೆ ಇದ ತಂದು, ಈಗ ಇಲ್ಲಿಗೆ ಇದ ತಂದು
ಗಿಡಗಂಟೆಗಳ ಕೊರಳೊಳಗಿಂದ ಹಕ್ಕಿಗಳಾ ಹಾಡು
ಹೊರಟಿತು, ಹಕ್ಕಿಗಳಾ ಹಾಡು
ಗಂಧರ್ವರ ಸೀಮೆಯಾಯಿತು, ಕಾಡಿನಾ ನಾಡು
ಕ್ಷಣದೊಳು, ಕಾಡಿನಾ ನಾಡು 

Monday, January 28, 2013

ಭಯೋತ್ಪಾದಕ ಎಂದ ಸಂಸದ

ಜವಾಬ್ದಾರಿಯುತ ಹುದ್ದೆಯಾದ ಕೇಂದ್ರ ಗೃಹ ಮಂತ್ರಿ ಸ್ಥಾನವನ್ನು ಅಲಂಕರಿಸಿರುವ ಶಿಂಧೆಯವರ ಹೇಳಿಕೆಯನ್ನು ಖಂಡಿಸುತ್ತೇನೆ. ಅವರು ತಮ್ಮ ಸ್ಥಾನಕ್ಕೆ ಗೌರವ ಕೊಟ್ಟು, ಸರ್ವ ಧರ್ಮಗಳು ಸಮ ಎಂದು ಭಾವಿಸಿ, ಸಮಾಜದಲ್ಲಿ ಸಮರಸ ಸಮನ್ವಯ ಬೆಳೆಸಲಿ. ಇಂತಹ ಕೀಳುಮಟ್ಟದ ಹೆಳಿಕೆಕೊಡದೆ, ಭಾರತದ ಶಾಂತಿಯನ್ನು ಕದಡದಂತೆ ನಡೆದುಕೊಳ್ಳಲಿ. ಅವರ ಈ ಹೇಳಿಕೆಯನ್ನು ಸ್ವತ: ಕಾಂಗ್ರೆಸ್ ಮುಖಂಡರೆ ಸ್ವಾಗತಿಸಿಲ್ಲ, ಈ ಬಗ್ಗೆ ಪ್ರತಿಕ್ರಿಯೆ ಕೊಡಲು ಹಿರಿಯ ಕಾಂಗ್ರಸ್ಸಿಗರು ನಿರಾಕರಿಸಿದ್ದಾರೆ. ನಾವು ವಯಸ್ಸು ಮತ್ತು ಅನುಭವದಲ್ಲಿ ಅವರಿಗಿಂತ ಚಿಕ್ಕವರಾದುದರಿಂದ, ಈ ಸಲಹೆಯನ್ನು ಅವರಿಗೆ ಗೌರವದಿಂದ ಕೊಡಲು ಬಯಸುತ್ತೇವೆ. ಬಂಧಿಯಾಗಿರುವ ಭಯೋತ್ಪಾದಕರಿಗೆ ಮರಣ ದಂಡ ಶಿಕ್ಷೆಯಾದರೂ ಕೂಡ ಅಂತಹ ಅಪರಾಧಿಗೆ ಗಲ್ಲಿಗೆರಿಸದೆ ಮತ ಬ್ಯಾಂಕ್ ಗೋಸ್ಕರ ತುಚ್ಚ ರಾಜಕೀಯ ನಡೆಸುತ್ತಿರುವ ಇಂತಹ ನಾಯಕರಿಗೆ  ನಮ್ಮ ಧಿಕ್ಕಾರವಿದೆ. ಭಾರತದ ಅಭ್ಯುದಯಕ್ಕೆ ರಾಷ್ಟೀಯ ಸ್ವಯಂ ಸೇವಕ ಸಂಘ ಮತ್ತು ಭಾರತೀಯ ಜನತಾ ಪಕ್ಷದ ಸೇವೆ ಎಷ್ಟು, ಏನು, ಹೇಗೆ  ಎಂದು ಎಲ್ಲರಿಗೂ ಗೊತ್ತು. ಸೋನಿಯಾರ  ಮೆಚ್ಚುಗೆಗಳಿಸಲು ವಿವೇಕವಿಲ್ಲದೆ, ಅದೂ ಕೂಡ ಪ್ರಧಾನಿಯ ಸಮ್ಮುಖದಲ್ಲೇ ಮೂರ್ಖರಂತೆ, ಹಿಂದೂ ವಿರೋಧಿ ಹೇಳಿಕೆಕೊಡುವದು ನಾಚಿಕೆಗೇಡು ಸಂಗತಿ. ಇಂತಹ ನಡವಳಿಕೆ ಇವರಿಗೆ ಶೋಭೆತರದು. ತಮ್ಮ ಮಾತನ್ನು ಹಿಂದೆ ತೆಗೆದುಕೊಳ್ಳಲಿ ಮತ್ತು ಹಿಂದೂ ಸಂಘಟನೆಯ ಕ್ಷಮೆಯಾಚಿಸಿಲಿ.